ವಿಶಾಖಪಟ್ಟಣಂ: ಆನ್ಲೈನ್ ಕ್ರೆಡಿಟ್ ಆ್ಯಪ್ ಮೂಲಕ ಸಾಲ ಪಡೆದುಕೊಂಡ ಯುವತಿಯೊಬ್ಬಳು ಹಣ ಹಿಂದಿರುಗಿಸಲು ಸಾಧ್ಯವಾಗದೇ, ಸಾಲ ನೀಡಿದವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಅಹ್ಲಾದಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ವಿಶಾಖಪಟ್ಟಣ ಜಿಲ್ಲೆಯ ಗಜುವಾಕಾದ ಸುಂದರಯ್ಯ ಕಾಲನಿಯ ನಿವಾಸಿ. ಎಂಬಿಎ ಮುಗಿಸಿದ್ದ ಅಹ್ಲಾದಾ ಉದ್ಯೋಗ ಹುಡುಕಾಟದಲ್ಲಿದ್ದಳು. ಆದರೆ, ಕೆಲಸ ಸಿಕ್ಕಿರಲಿಲ್ಲ. ಬಡ ಕುಟುಂಬ ಆದ್ದರಿಂದ ಮನೆಯ ಅಗತ್ಯ ವಸ್ತುಗಳನ್ನು ಕೊಳ್ಳಲು ಫ್ರೆಂಡ್ಸ್ ಬಳಿ ಸಾಲ ಮಾಡಿದ್ದಳು. ಫ್ರೆಂಡ್ಸ್ ಸಾಲ ತೀರಿಸಲು ಆಕೆ ಆನ್ಲೈನ್ ಕ್ರೆಡಿಟ್ ಆ್ಯಪ್ ಮೊರೆ ಹೋಗಿದ್ದಳು. ಆದರೆ, ಇದ್ಯಾವುದರ ಬಗ್ಗೆ ಆಕೆಯ ಕುಟುಂಬಕ್ಕೆ ತಿಳಿದಿರಲಿಲ್ಲ.
ಮಂಗಳವಾರ ಆಹ್ಲಾದಾ ಪಾಲಕರು ಕೆಲಸಕ್ಕೆಂದು ತೆರಳಿದ್ದರು. ಮನೆಯಲ್ಲಿದ್ದ ಸಹೋದರ ಸ್ನಾನಕ್ಕೆಂದು ಬಾತ್ರೂಂ ಸೇರಿದಾಗ, ಆಹ್ಲಾದಾ ಕೋಣೆಯೊಳಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡು ನೇಣು ಬಿಗಿದುಕೊಂಡಿದ್ದಾಳೆ. ಇದರ ಮಧ್ಯೆ ಆಕೆಯ ತಾಯಿ ಉಷಾಮಣಿ ಅನೇಕ ಬಾರಿ ಕರೆ ಮಾಡಿದ್ದಾರೆ. ಆದರೆ, ಯಾವುದೇ ಉತ್ತರ ಬರದಿದ್ದಾಗ ಅನುಮಾನಗೊಂಡ ತಾಯಿ, ಮಗನಿಗೆ ಕರೆ ಮಾಡಿ ಆಹ್ಲಾದಾಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಐಪಿಎಲ್ ಟ್ರೋಫಿಯ ಮೇಲೆ ಸಂಸ್ಕೃತದಲ್ಲಿ ಏನೆಂದು ಬರೆಯಲಾಗಿದೆ ಗೊತ್ತೇ?
ತಾಯಿ ಹೇಳಿದ ಮಾತು ಕೇಳಿ ಸಹೋದರಿಯನ್ನು ಹುಡುಕುತ್ತಾ ಹೋದ ಸಹೋದರನಿಗೆ ಶಾಕ್ ಎದುರಾಗಿತ್ತು. ಮನೆಯ ಕೋಣೆಯೊಂದರಲ್ಲಿ ಆಕೆಯ ದೇಹ ನೇತಾಡುತ್ತಿತ್ತು. ತಕ್ಷಣ ಸಹೋದರ ಸ್ಥಳೀಯರು ಮತ್ತು ಪಾಲಕರಿಗೆ ಮಾಹಿತಿ ಮುಟ್ಟಿಸಿದ್ದಾನೆ. ಮನೆಗೆ ಬಂದು ನೋಡಿದ ಪಾಲಕರಿಗೆ ಆಹ್ಲಾದಾ ಮೃತಪಟ್ಟಿರುವುದನ್ನು ಕೇಳಿ ದಿಗಿಲು ಬಡಿದಂತಾಗಿತ್ತು.
ಇದೇ ವೇಳೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ವಿವಿಧ ಮೊಬೈಲ್ ಆ್ಯಪ್ಗಳ ಮೂಲಕ ಆಹ್ಲಾದಾ ಸುಮಾರು 25 ಸಾವಿರ ರೂಪಾಯಿ ಸಾಲ ಪಡೆದಿದ್ದ ವಿಚಾರ ಗೊತ್ತಾಗಿದೆ. ಹಣವನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದಾಗ ಆ್ಯಪ್ ಮ್ಯಾನೇಜ್ಮೆಂಟ್ ಹಣ ಹಿಂದಿರುಗಿಸುವಂತೆ ಕಿರುಕುಳ ನೀಡಲು ಆರಂಭಿಸಿತ್ತು. ಅಲ್ಲದೆ, ಪಾಲಕರಿಗೆ ಕರೆ ಮಾಡಿ ತಿಳಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಕಿರುಕುಳ ತಾಳಲಾರದೇ ಆಹ್ಲಾದಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)