ಶಿವಮೊಗ್ಗ: ವಿನೋಬನಗರ 5 ಮತ್ತು 6ನೇ ಕ್ರಾಸ್ನ ಮುಖ್ಯರಸ್ತೆಯಲ್ಲಿನ ಅವ್ಯವಸ್ಥೆ ಖಂಡಿಸಿ ಭಾನುವಾರ ಪ್ರತಿಭಟಿಸಿದ ಸ್ಥಳೀಯರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ಸಿಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲಕ್ಕೂ ಮುನ್ನವೇ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ರಸ್ತೆ ಒತ್ತುವರಿಯಾಗಿದ್ದು ಪಾದಚಾರಿಗಳ ಓಡಾಟಕ್ಕೆ ಪುಟ್ಪಾತ್ ಇಲ್ಲದಂತಾಗಿದೆ. ಇದರಿಂದ ಜನ, ವಾಹನ ಸಂಚಾರ ದುಸ್ತರವಾಗಿದೆ. ಕಿರಿದಾದ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಸಮೀಪದಲ್ಲಿಯೇ ಸ್ಮಾರ್ಟ್ಸಿಟಿಯಿಂದ ನಡೆಯುತ್ತಿರುವ ಕಾಮಗಾರಿಗಳು ಕೂಡ ಅಪೂರ್ಣವಾಗಿವೆ ಎಂದು ನಿವಾಸಿಗಳು ದೂರಿದರು.
ಇಷ್ಟೆಲ್ಲ ಅವ್ಯವಸ್ಥೆಯಿದ್ದರೂ ಪಾಲಿಕೆ ನಾಗರಿಕರ ಅಹವಾಲು ಕೇಳುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಸಂಪೂರ್ಣ ನಿರ್ಲಕ್ಷೃ ವಹಿಸಿದೆ. ಸಮಸ್ಯೆ ಬಗೆಹರಿಯದಿದ್ದರೆ ಸೋಮವಾರ ಕೂಡ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
6 ತಿಂಗಳ ಹಿಂದೆಯೇ 5 ಮತ್ತು 6ನೇ ಕ್ರಾಸ್ನ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ. ಬಿಡುಗಡೆ ಆಗಿದೆ. ಆದರೂ ಅಧಿಕಾರಿಗಳಿಂದ ಇಂದು, ನಾಳೆ ಎಂಬ ಕುಂಟುನೆಪ ಹೇಳುತ್ತಿದ್ದಾರೆ. ಸಂಬಂಧಪಟ್ಟ ಇಂಜಿನಿಯರ್ಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. ಸ್ಥಳಕ್ಕೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ಸಿಟಿ ಅಧಿಕಾರಿಗಳು ಆಗಮಿಸಬೇಕೆಂದು ನಾಗರಿಕರು ಒತ್ತಾಯಿಸಿದರು. ಸ್ಥಳೀಯ ನಿವಾಸಿಗಳಾದ ಶರತ್, ರವೀಶ್, ಶಿವಮೂರ್ತಿ, ರಾಮಮೂರ್ತಿ, ದಿನೇಶ್, ಪುನೀತ್ರಾಜ್ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.