ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಹತ್ಯೆ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ ಸಿಬಿಐ ಬಲೆಗೆ ಬಿದ್ದಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೂ ಈ ಪ್ರಕರಣದ ಮೊದಲ ಆರೋಪಿ ಬಸವರಾಜ್ ಶಿವಪ್ಪ ಮುತ್ತಗಿಗೂ ನಿಕಟ ಸಂಪರ್ಕ ಇತ್ತು. ಬಸವರಾಜ್ಗೆ ವಿನಯ್ ಕುಲಕರ್ಣಿ ಪರೋಕ್ಷವಾಗಿ ಸಹಕಾರ ನೀಡಿದ್ದರು ಎಂಬ ರಹಸ್ಯ ಸಿಬಿಐ ತನಿಖೆಯಲ್ಲಿ ಬಯಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಮೊದಲ ಆರೋಪಿ ಬಸವರಾಜ್ ಜತೆ ವಿನಯ್ ಕುಲಕರ್ಣಿ ಒಡನಾಟ ಹೊಂದಿದ್ದು, ಆತನಿಗೆ ಸಹಕರಿಸಿದ ಬಗ್ಗೆ ಸಿಬಿಐಗೆ ಕೆಲ ಮಾಹಿತಿಗಳು ಸಿಕ್ಕಿದ್ದವು. ಈ ಆಧಾರದ ಮೇಲೆ ಸಿಬಿಐ ತನಿಖೆ ನಡೆಸಿ ವಿನಯ್ ಕುಲಕರ್ಣಿಯ ಹೇಳಿಕೆ ದಾಖಲಿಸಿಕೊಂಡಿದೆ.
ಆದರೆ, ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪ್ರಕರಣದ ಬಗ್ಗೆ ಮಾಹಿತಿ ನೀಡಲಿಲ್ಲ ಎನ್ನಲಾಗುತ್ತಿದೆ. ನನಗೂ ಯೋಗೀಶ್ಗೌಡ ಕೊಲೆಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಸುಮ್ಮನೆ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಬಿಐ ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹತ್ಯೆಗೆ ಸಂಬಂಧಿಸಿದಂತೆ ವಿನಯ್ ವಿರುದ್ಧ ಪತ್ತೆಯಾದ ಸಾಕ್ಷ್ಯವನ್ನು ಮುಂದಿಟ್ಟುಕೊಂಡು ಸಿಬಿಐ ತನಿಖೆ ಮುಂದುವರಿಸಲು ಹೊರಟಿದೆ.
ಸಿಸಿ ಕ್ಯಾಮರಾ, ಮೊಬೈಲ್ ಕರೆಗಳ ಆಧಾರದ ಮೇಲೆ ಸಿಬಿಐ ತನಿಖೆ ನಡೆಸಿದಾಗ ಇತರ ಆರೋಪಿಗಳ ಸುಳಿವು ಸಿಕ್ಕಿತ್ತು. ಯೋಗೀಶ್ ಗೌಡ ಕೊಲೆಯಾದ ಸ್ಥಳ ಜಿಮ್ನಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಕಲೆ ಹಾಕಲಾಗಿತ್ತು.
ಈಗಾಗಲೇ ಸಿಬಿಐ ಅಧಿಕಾರಿಗಳು ಧಾರವಾಢದ ನಿವಾಸಿ ಬಸವರಾಜ ಶಿವಪ್ಪ ಮುತ್ತಗಿ, ವಿಕ್ರಂ ಬಳ್ಳಾರಿ, ಕೀರ್ತಿಕುಮಾರ್ ಬಸರಾಜ್ ಕುರಹಟ್ಟಿ, ಸಂದೀಪ್ ಸವದತ್ತಿ, ವಿನಾಯಕ ಕಟಗಿ, ಮಹಬಲೇಶ್ವರ ಹೊಂಗಲ್, ಸಂತೋಷ್ ಸವದತ್ತಿ, ಎಂ.ದಿನೇಶ್, ಎಸ್.ಅಶ್ವತ್ಥ್, ಕೆ.ಎಸ್.ಸುನೀಲ್, ನಜೀರ್ ಅಹಮದ್, ಶಾನ್ವಾಜ್, ಕೆ.ನೂತನ್, ಸಿ.ಹರ್ಷಿತ್ ಕೃತ್ಯದ ಬಗ್ಗೆ ಮೊದಲ ಚಾರ್ಜ್ಶೀಟ್ನಲ್ಲಿ ಸಿಬಿಐ ಎಳೆಎಳೆಯಾಗಿ ಉಲ್ಲೇಖಿಸಿದೆ. ಅಂತಿಮ ಹಂತದ ಚಾರ್ಜ್ಶೀಟ್ನಲ್ಲಿ ವಿನಯ್ ಕುಲಕರ್ಣಿ ಹಾಗೂ ಇನ್ನಿತರರ ಕೃತ್ಯವನ್ನೂ ಉಲ್ಲೇಖಿಸುವ ಸಾಧ್ಯತೆಗಳಿವೆ.
ವಾಟ್ಸ್ಆ್ಯಪ್ ವಿಡಿಯೋ ಕರೆ ಮಾಡಿದ್ದ ಯುವತಿ ಬೆತ್ತಲಾಗಿ ನಿಂತಿದ್ದಳು! ಮುಂದೆ ಆಗಿದ್ದೆಲ್ಲವೂ ಅವಾಂತರ
ಬೆಂಗಳೂರು ವಿವಿ ನಿವೃತ್ತ ಪ್ರೊಫೆಸರ್ ಆತ್ಮಹತ್ಯೆ ಹಿಂದಿದೆ 2.5 ಕೋಟಿ ರೂಪಾಯಿ ರಹಸ್ಯ!