ಬೆಂಗಳೂರು: ಕುಲಪತಿ ಹುದ್ದೆ ಪಡೆಯಲು 2.5 ಕೋಟಿ ರೂಪಾಯಿ ಸಾಲ ಮಾಡಿದ್ದೇ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಅಶೋಕ್ ಕುಮಾರ್ ಆತ್ಮಹತ್ಯೆಗೆ ಕಾರಣವಾಯಿತೇ?
ಹೀಗೊಂದು ಅನುಮಾನವನ್ನು ಕಾಂಗ್ರೆಸ್ ಹೊರಹಾಕಿದೆ. ರಾಜ್ಯದಲ್ಲಿ ಉಪಕುಲಪತಿ ಹುದ್ದೆಯನ್ನು ಮಾರಾಟಕ್ಕೆ ಇಡಲಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಭ್ರಷ್ಟಾಚಾರವೇ ಪೊ.ಅಶೋಕ್ ಕುಮಾರ್ ಅವರ ಆತ್ಮಹತ್ಯೆಗೆ ಕಾರಣ ಎಂದು ವ್ಯಾಪಕ ಚರ್ಚೆಯಾಗುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯಕ್ಕೆ ಬೇಕಾದ, ಸಾವಿರಾರು ಪತ್ರಕರ್ತರನ್ನು ತಯಾರು ಮಾಡಿದ ಪ್ರೊ. ಅಶೋಕ್ ಕುಮಾರ್ ಸಾಮಾನ್ಯ ವ್ಯಕ್ತಿಯಲ್ಲ. ಅವರ ಆತ್ಮಹತ್ಯೆ ವಿಚಾರ ಆಘಾತ ನೀಡಿದೆ. ಈ ಆತ್ಮಹತ್ಯೆಗೆ ಕಾರಣ ಏನು? ಎಂಬುದರ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಮಗೆ ತಿಳಿದಿರುವ ಪ್ರಕಾರ ನಾಲ್ಕು ಮಂದಿಯ ಹೆಸರು ಉಪಕುಲಪತಿ ಹುದ್ದೆಗೆ ಕೇಳಿಬಂದಿದ್ದು, ನೇಮಕ ವಿಚಾರದಲ್ಲಿ ಸಾಕಷ್ಟು ಪೈಪೋಟಿ, ವ್ಯಾಪಾರ ನಡೆದಿದೆ. ಪಾಪ ಆ ಪ್ರೊಫೆಸರ್ ಬಡ್ಡಿಗೆ ಹಣ ತಂದು ಕೊಟ್ಟರೂ ಅವರನ್ನು ನೇಮಕ ಮಾಡಲಿಲ್ಲ. ತಮಗೆ ಹುದ್ದೆಯೂ ಸಿಗಲಿಲ್ಲ, ಕೊಟ್ಟ ಹಣವೂ ವಾಪಸ್ ಬಾರದ ಕಾರಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದರಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಈ ಹಣವನ್ನು ಯಾವ ಅಧಿಕಾರಿ, ಮಂತ್ರಿ, ಮಧ್ಯವರ್ತಿ ತೆಗೆದುಕೊಂಡರೋ, ಈ ಎಲ್ಲದರ ಬಗ್ಗೆ ದೊಡ್ಡ ಮಟ್ಟದ ತನಿಖೆಯ ಅಗತ್ಯ ಕಾಣಿಸುತ್ತಿದೆ. ಆತ್ಮಹತ್ಯೆ ಪತ್ರದಲ್ಲಿ ಸಾವಿಗೆ ತಾವೇ ಕಾರಣ ಎಂದು ಬರೆದಿದ್ದರೂ, ಸರ್ಕಾರದಲ್ಲಿ ಇರುವವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆದಿರುವುದು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಕೇಳಿಬರುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ವಿದ್ಯಾರ್ಥಿವರೆಗೂ ಉಪಕುಲಪತಿ ಹುದ್ದೆ ವ್ಯಾಪಾರಕ್ಕೆ ಇದೆ ಎಂದು ಚರ್ಚೆಯಾಗುತ್ತಿದೆ. ಹೀಗಾಗಿ ಈ ಪ್ರಕರಣದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಯವರ ಹೆಸರಿಗೆ ಮಸಿ ಬಳೆಯುವ ಕೆಲಸವಾಗುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಶೋಕ್ ಕುಮಾರ್ ಅವರು ಎಂತಹ ಗಟ್ಟಿಯಾದ ವ್ಯಕ್ತಿ ಎಂದು ಅವರ ಪಾಠ ಕೇಳಿದ ಮಾಧ್ಯಮದವರಿಗೆ ಗೊತ್ತಿದೆ. ನಮಗೆ ಬಂದಿರುವ ಖಚಿತ ಮಾಹಿತಿ ಆಧಾರದ ಮೇಲೆ ನಾವು ಈ ವಿಚಾರ ಪ್ರಸ್ತಾಪಿಸುತ್ತಿದ್ದೇನೆ. ಈ ವಿಚಾರದಲ್ಲಿ ತನಿಖೆ ಆದರೆ ಸತ್ಯಾಂಶ ಹೊರಬೀಳಲಿದೆ ಎಂದಿದ್ದಾರೆ.
ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಇರುವ ತಮ್ಮ ಮನೆಯಲ್ಲಿ ಅಶೋಕ್ ಕುಮಾರ್ ಅವರು ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ನನ್ನ ಸಾವಿಗೆ ನಾನೇ ಕಾರಣ; ಬರೆದಿಟ್ಟು ನೇಣಿಗೆ ಶರಣಾದರು ನಿವೃತ್ತ ಪ್ರೊಫೆಸರ್