ಕೊಪ್ಪ: ವೃದ್ಧಾಪ್ಯ ವೇತನ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆಂದು ಆರು ತಿಂಗಳಿಂದ ಕಾದು ಕುಳಿತಿದ್ದ ವೃದ್ಧೆ ತಾಲೂಕು ಕಚೇರಿಯಲ್ಲಿ ವಿಚಾರಿಸಿದಾಗ, ‘ನೀವು ಮರಣ ಹೊಂದಿದ್ದೀರೆಂದು ವರದಿಯಾಗಿದೆಯಲ್ಲ’ ಎಂಬ ಮಾತು ಕೇಳಿ ಹೌಹಾರಿದ್ದಾರೆ!
ಬದುಕಿದ್ದರೂ ದಾಖಲೆಯಲ್ಲಿ ಸತ್ತಿರುವುದು ಹೇಗೆ ಎಂದು ತಿಳಿಯದಂತಾದವರು ಹರಂದೂರು ಗ್ರಾಪಂನ ಸಣ್ಣಕೆರೆ ಗ್ರಾಮದ ವೃದ್ಧೆ ಜಯಮ್ಮ. ಗ್ರಾಮಲೆಕ್ಕಿಗನು ವೃದ್ಧೆ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಮೃತಪಟ್ಟಿದ್ದಾರೆ ಎಂದು ಕೊಟ್ಟ ವರದಿಯಿಂದ ಇವರ ವೃದ್ಧಾಪ್ಯವೇತನ ಖಾತೆಗೆ ಪಾವತಿಯಾಗಿಲ್ಲ.
ಜನವರಿಯಲ್ಲಿ ಕೊನೆಯ ಬಾರಿಗೆ ಸರ್ಕಾರದ ಹಣ ಖಾತೆಗೆ ಜಮಾ ಆಗಿತ್ತು. ನಂತರ ಹಣ ಜಮಾ ಆಗದಿರುವುದನ್ನು ಕಂಡು ವೃದ್ಧೆ ಜಯಮ್ಮ ಅವರು ಪಕ್ಕದ ಮನೆಯ ಹರೀಶ್ ಬಳಿ ತಾಲೂಕು ಕಚೇರಿಯಲ್ಲಿ ವಿಚಾರಿಸಿಕೊಂಡು ಬರಲು ತಿಳಿಸಿದ್ದರು. ಹರೀಶ್ ಅವರು ಅಧಿಕಾರಿಯನ್ನು ಸಂರ್ಪಸಿದಾಗ, ಜಯಮ್ಮ ಸಾವನಪ್ಪಿದ್ದಾರೆ ಎಂದು ಹರಂದೂರು ಗ್ರಾಮಲೆಕ್ಕಿಗ ನೇಸರ್ ವರದಿ ನೀಡಿದ್ದಾರೆ. ಆ ಕಾರಣಕ್ಕಾಗಿ ವೃದ್ಧಾಪ್ಯ ವೇತನ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.