ಶಿವಮೊಗ್ಗ:ಕಾಂಗ್ರೆಸ್ ನಾಯಕರು ಎಷ್ಟೇ ಟೀಕೆ ಮಾಡಿದರೂ ಪ್ರಜ್ಞಾವಂತ ಮತದಾರರಿಗೆ ಬಿಜೆಪಿ ಬಗ್ಗೆ ಅರಿವಿದೆ. ಉತ್ತರ ಪ್ರದೇಶ, ಗೋವಾದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಪ್ರಚಾರ ಮಾಡಿದ್ದರು. ಸಮೀಕ್ಷೆಗಳು ಸುಳ್ಳಾಗಿ ಅಲ್ಲಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕರ್ನಾಟಕದಲ್ಲೇ ಇತಿಹಾಸ ಮರುಕಳಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕು. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದರು.
ಕೇಂದ್ರ ಸರ್ಕಾರ ಬಡವರಿಗೆ ಉಚಿತವಾಗಿ ನೀಡಿದ ಅಕ್ಕಿಯನ್ನು ಸಿದ್ದರಾಮಯ್ಯ ಫೋಟೋ ಬಳಸಿ ಕಾಂಗ್ರೆಸ್ನವರು ಪ್ರಚಾರ ಪಡೆದರು. ಕಾಂಗ್ರೆಸ್ ಬೆಂಬಲಿತ ಕೆಲವು ಗುತ್ತಿಗೆದಾರರು ಕಾಮಗಾರಿಗಳ ಬಿಲ್ ನೀಡಿಲ್ಲ. ಸರ್ಕಾರದಲ್ಲಿ ಶೇ.40 ಕಮೀಷನ್ ನಡೆಯುತ್ತಿದೆ ಎಂದು ಅಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೀಪಾವಳಿ ಬಂದಾಗ ಪಟಾಕಿ ಸಿಡಿಸುವಂತೆ ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿವೆ. ಎಲ್ಲೆಡೆ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ವೃಥಾ ಭ್ರಷ್ಟಾಚಾರ ಆರೋಪ ಮಾಡಲಾಗುತ್ತಿದೆ. ಇದೆಲ್ಲವನ್ನೂ ಎದುರಿಸುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ ಎಂದರು.
ಯಾತ್ರೆ ಅಲ್ಲ, ಪಿಕ್ನಿಕ್
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯನ್ನು ಪಿಕ್ನಿಕ್ ಎಂದು ಲೇವಡಿ ಮಾಡಿದ ಬಿ.ವೈ.ವಿಜಯೇಂದ್ರ, ವಿವಾದಕ್ಕೆ ಕಾರಣರಾಗಿರುವ ಫಾದರ್ ಅವರನ್ನು ಭೇಟಿಯಾಗಿ ರಾಹುಲ್ ಗಾಂಧಿ ಜೀಸಸ್ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆದಿತ್ತು. ಕಾಂಗ್ರೆಸ್ನವರು ಅದರ ಪ್ರಸ್ತಾಪವನ್ನೇ ಮಾಡುತ್ತಿಲ್ಲ. ಕೇರಳದ ಮುಸ್ಲಿಂ ಶಾಲೆಗಳಲ್ಲಿ ಓಣಂ ಆಚರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇದರ ಬಗ್ಗೆ ಕಾಂಗ್ರೆಸ್ನವರು ಯಾವುದೇ ಪ್ರತಿಕ್ರಿಯೆ ನೀಡುವ ಮನಸ್ಥಿತಿಯಲ್ಲಿಲ್ಲ ಎಂದು ಟೀಕಿಸಿದರು.