ವಿಜಯಪುರ: ಒಂದೆಡೆ ಭೂಕಂಪನ ಇನ್ನೊಂದೆಡೆ ಕಲ್ಲು ಗಣಿಗಾರಿಕೆಯಿಂದ ಮನೆಗಳು ಬಿರುಕು ಬಿಡುತ್ತಿದ್ದು, ಸಾರ್ವಜನಿಕರು ತೀವ್ರ ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟಕಗಳನ್ನು ಬಳಸುವುದಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ಐನಾಪುರ ಗ್ರಾಮಸ್ಥರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಜಯಶ್ರೀ ಜಾಧವ ಮಾತನಾಡಿ, ಐನಾಪುರ ಗ್ರಾಪಂ ಬುರಣಾಪುರ ರಸ್ತೆಯ ಬದಿಯಲ್ಲಿ 40 ಕಲ್ಲು ಖಣಿಗಳು ಇವೆ. ಪರವಾನಗಿ ಇಲ್ಲದೆ ರಾಜಾರೋಷವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಅಲ್ಲದೇ, ಅವೈಜ್ಞಾನಿಕವಾಗಿ ಸ್ಫೋಟಕ ವಸ್ತು ಬಳಸುತ್ತಿರುವುದರಿಂದ ಸುತ್ತಲಿನ ನಿವಾಸಿಗಳು ಜೀವ ಭಯದಲ್ಲಿ ಕಾಲ ಕಳೆಯುವಂತಾಗಿದೆ ಎಂದರು.
ಐನಾಪುರ ಗ್ರಾಪಂ ವ್ಯಾಪ್ತಿಯ ಐನಾಪುರ ತಾಂಡಾ, ಬುರಣಾಪುರ ಗ್ರಾಮದ ಬಸವನಗರ ಬಡಾವಣೆ ನಿವಾಸಿಗಳು ಸ್ಫೋಟಕಗಳಿಂದ ಭಯಭೀತರಾಗಿದ್ದಾರೆ. ರಾತ್ರಿ ಸ್ಫೋಟಕ ಬಳಸುತ್ತಿರುವುದರಿಂದ ಭಯಭೀತರಾಗಿ ಜನ ಮನೆಯಿಂದ ಹೊರ ಬರುತ್ತಿದ್ದಾರೆ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲದಾಗಿದೆ. ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಚಂದು ಜಾಧವ, ಸುಭಾಸ ಹಳ್ಳದ, ಮಲ್ಲಿಕಾರ್ಜುನ ಗಾಣಿಗೇರ, ಮಡಿವಾಳಪ್ಪ ಹಡಗಿ, ಮಧು ರಾಠೋಡ, ಕರೆಪ್ಪ ಬಸನಾಳ, ವಿದ್ಯಾ ಚಿಮ್ಮಲಗಿ, ರೇಣುಕಾ ಹಳ್ಳಿ, ಶಕೀಲ ಭಾಗವಾನ, ಪರಮೇಶ್ವರ ಮಾನೆ, ಸಂತೋಷ, ಸುಭಾಸ ಪಾಟೀಲ, ವಿಠಲ ಕಾಖಂಡಕಿ, ಸುಜಾತಾ ಗಣಪತಿ ಒಂಬಾಸೆ ಮತ್ತಿತರರಿದ್ದರು.