ಪುತ್ತೂರು: ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಿಂದ ವಿಜಯವನ್ನು ಸಾಧಿಸಿದ ಅಶೋಕ್ ಕುಮಾರ್ ರೈ ಅವರು ಅಭಿಮಾನಿಗಳಲ್ಲಿ ವಿಜಯೋತ್ಸವದ ಹೆಸರಿನಲ್ಲಿ ದುಂದುವೆಚ್ಚವನ್ನು ಮಾಡದೆ, ಬಡವರಿಗೆ ನೆರವಾಗುವಂತೆ ಕರೆಯನ್ನು ನೀಡಿದ್ದರು. ಎ. ಆರ್. ವಾರಿಯರ್ಸ್ ತಂಡ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವಾಗುವ ’ವಿಜಯವಾಣಿ’ ’ವಿದ್ಯಾರ್ಥಿ ಮಿತ್ರ’ ಪತ್ರಿಕೆಯನ್ನು ಹಂಚುವ ಮೂಲಕ ಸಂಭ್ರಮಿಸಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಚುನಾವಣೆಯನ್ನು ಗೆದ್ದಾಗ ಮೆರವಣೆಗೆ, ಸನ್ಮಾನ, ವಿಜಯೋತ್ಸವ ಮಾಡದೆ, ಆ ಹಣವನ್ನು ಸಮಾಜದ ಬಡವರಿಗಾಗಿ ವಿನಿಯೋಗ ಮಾಡಬೇಕು ಎಂಬ ಸೂಚನೆಯನ್ನು ಕಾರ್ಯಾಕರ್ತರಿಗೆ ನೀಡಲಾಗಿದ್ದು, ‘ವಿಜಯವಾಣಿ’ಪತ್ರಿಕೆಯನ್ನು ಬಡ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಚಿತವಾಗಿ ನೀಡುವ ಮೂಲಕ ಸಹಾಯಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ಅಶೋಕ್ ಕುಮಾರ್ ರೈ ಅಭಿಮಾನ ಬಳಗವಾದ ಎ.ಆರ್. ವಾರಿಯರ್ಸ್ ಪ್ರಜ್ವಲ್ ರೈ ಪಾತಾಜೆ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಕಳೆದ ಏಳು ವರ್ಷಗಳಿಂದ ರಕ್ತದಾನ, ಕೋವಿಡ್ ಸಂದರ್ಭದಲ್ಲಿ ಆಹಾರದ ಕಿಟ್ ವಿತರಣೆ, ವಿವಿಧ ಕಡೆಯಲ್ಲಿ ಶ್ರಮಧಾನ, ಬದವರಿಗೆ ಪಡಿತರ ವಿತರಣೆ, ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮಾಡಿಕೊಂಡು ಬರುತ್ತಿದೆ.
ಚುನಾವಣೆ ಗೆಲುವಿನ ಸಂದರ್ಭ ವಿಜಯೋತ್ಸವದಲ್ಲಿ ಪಟಾಕಿ ಸಿಡಿಸದೆ ಉಳಿಕೆ ಮಾಡಿದ ಹಣದಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ಒಂದು ವರ್ಷ ಶೈಕ್ಷಣಿಕ ಚಟುವಟಿಕೆಗೆ ಸಹಾಯವಾಗುವ ‘ವಿದ್ಯಾರ್ಥಿ ಮಿತ್ರ‘ವನ್ನು ಉಚಿತವಾಗಿ ಪೂರೈಕೆ ಮಾಡುತ್ತಿದ್ದಾರೆ.