ವಿಜಯಪುರ: ಇತ್ತೀಚೆಗೆ ನಗರದಲ್ಲಿ ಹಿಂದು ಮಹಿಳೆ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಮತ್ತು ಶಕ್ತಿ ದುರ್ಗಾವಾಹಿನಿ ಆಶ್ರಯದಲ್ಲಿ ನಗರದ ಸಿದ್ಧೇಶ್ವರ ದೇವಸ್ಥಾನ ಎದುರು ಭಾನುವಾರ ಪ್ರತಿಭಟನೆ ನಡೆಯಿತು.
ವಿಶ್ವ ಹಿಂದು ಪರಿಷತ್ನ ಉತ್ತರ ಪ್ರಾಂತ ಪ್ರಮುಖ ಸುನೀಲ ಬೈರವಾಡಗಿ ಮಾತನಾಡಿ, ಒಬ್ಬ ಹಿಂದು ಮಹಿಳೆ ಮೇಲೆ ಜಿಹಾದಿ ಗೂಂಡಾಗಳು ಹಲ್ಲೆ ನಡೆಸಿ 10 ದಿನಗಳಾದರೂ ಅವರನ್ನು ಬಂಧಿಸಿಲ್ಲ. 3 ದಿನದ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭೇಟಿಯಾಗಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಮತ್ತು ದಾಳಿಯಿಂದ ಘಾಸಿಗೊಂಡ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.