ವಿಜಯಪುರ: ಮಕ್ಕಳು ಮೊಬೈಲ್ನಿಂದ ದೂರ ಇರಬೇಕು. ಪಾಲಕರು ಮಕ್ಕಳ ಚಲನವಲಗಳ ಬಗ್ಗೆ ಗಮನಹರಿಸುತ್ತಿರಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಹೇಳಿದರು.
ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಶನಿವಾರ ನಡೆದ ಚೈಲ್ಡ್ಲೈನ್ ಸೆ ದೋಸ್ತಿ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಅಂತರ್ಜಾಲ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು, ದೌರ್ಜನ್ಯ ಹಾಗೂ ಮಕ್ಕಳ ರಕ್ಷಣೆ ಕುರಿತು ವಿವರಿಸಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶ್ರೀಧರ ಕುಲಕರ್ಣಿ ಮಾತನಾಡಿ, ಜನಿಸಿದ ಮಗುವಿಗೆ 18 ವರ್ಷದವರೆಗೆ ರಕ್ಷಣೆ ಮಾಡುವ ಕೆಲಸವನ್ನು ಮಕ್ಕಳ ಸಹಾಯವಾಣಿ ಸೇವೆ ಮಾಡುತ್ತಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಹಸಿವನ್ನು ಹೆಚ್ಚಿಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಪೊಲೀಸ್ ಇಲಾಖೆ ಸೈಬರ್ ಕ್ರೈಂ ವಿಭಾಗದ ಸಿಪಿಐ ಸುರೇಶ ಬೆಂಡೆಗುಂಬಳ ಮಾತನಾಡಿ, ಮೊಬೈಲ್ ಹಾಗೂ ಅಂತರ್ಜಾಲದಿಂದ ದೌರ್ಜನ್ಯಗಳಾಗಬಹುದು ಎನ್ನುವ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಉಜ್ವಲ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿಯ ನಿರ್ದೇಶಕ ವಾಸುದೇವ ತೋಳಬಂದಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಹಾಯವಾಣಿ-1098ರ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ. ಚವ್ಹಾಣ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ವರಿ ಕೊಕಟನೂರ, ರಾಜಶೇಖರ ದೈವಾಡಿ, ಮಂಜು ಹೀರೆಮನಿ, ಪಿ.ಜೆ. ಆಲಮೇಲ, ಪಿ.ಎ. ನಿಕ್ಕಮ್ಮ, ರೂಪಾ ಮೇತ್ರಿ, ಪ್ರಮೀಳಾ ಪಾಟೀಲ, ಕೇಶವ ಟಿ. ಇನ್ನಿತರರಿದ್ದರು.