ವಿಜಯಪುರ: ಕೆಳಹಂತದಿಂದ ಪಕ್ಷ ಸಂಘಟನೆ ಅವಶ್ಯವಾಗಿದ್ದು, ಕಾರ್ಯಕರ್ತರು, ಮುಖಂಡರು ಪಕ್ಷಕ್ಕಾಗಿ ಶ್ರಮಿಸಬೇಕಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
ನಗರದ ಜೆಡಿಎಸ್ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ನಡೆದ ಜಿಲ್ಲೆಯ ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕುಗಳ ಪ್ರಮುಖ ಕಾರ್ಯಕರ್ತರ, ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿಯ ಜನರ ಮತ್ತು ರೈತರ ಸಮಸ್ಯೆ ಕುರಿತು ಪರಿಹಾರಕ್ಕಾಗಿ ಕ್ರಮ ಕೈಕೊಳ್ಳಬೇಕು. ಕೋವಿಡ್ನಂತಹ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಜನರಿಗೆ ತೊಂದರೆಯಾಗಿದ್ದು, ಆ ತೊಂದರೆಗೆ ಸರ್ಕಾರವು ಸ್ಪಂದಿಸುತ್ತಿಲ್ಲ. ತಕ್ಷಣವೇ ತಾಲೂಕು ಮತ್ತು ಜಿಲ್ಲಾಡಳಿತ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಸರ್ಕಾರವು ಇತ್ತೀಚೆಗೆ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿ ಜನ ಸಾಮಾನ್ಯರಿಗೆ, ಕಾರ್ಮಿಕರಿಗೆ, ರೈತರಿಗೆ ಸಾಕಷ್ಟು ತೊಂದರೆಗೆ ಸಿಲುಕಿಸಿದ್ದಾರೆ. ಈ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿದ್ದು ಅತಿವೃಷ್ಟಿಯಿಂದ ಹಾಗೂ ಕೃಷ್ಣಾ ಪ್ರವಾಹದಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.
ತಾಲೂಕಿನ ಮುಖಂಡರಾದ ಅಪ್ಪುಗೌಡ ಪಾಟೀಲ, ಚಂದ್ರಕಾಂತ ಹಿರೇಮಠ, ಶಶಿಧರ ಯರನಾಳ, ಮಾಲಿಂಗಪ್ಪ ಗಂಗಾಧರ ನಾಗಠಾಣ, ಮಲ್ಲಿಕಾರ್ಜುನ ಅವಟಿ, ಬಸು ಅವಟಿ, ಎನ್.ಎಸ್. ಪಾಟೀಲ, ಶಂಕರಗೌಡ ಪಾಟೀಲ, ಶರೀ ಬಾಗೇವಾಡಿ, ಕಾಶೀನಾಥ ಬುಯ್ಯರ ಹಾಗೂ ಪ್ರಮುಖ ಮುಖಂಡರುಗಳು ಭಾಗವಹಿಸಿದ್ದರು. ಇದೇ ವೇಳೆ ನೂತನವಾಗಿ ನೇಮಕಗೊಂಡ ಮೂರು ತಾಲೂಕು ಅಧ್ಯಕ್ಷರಿಗೆ ನೇಮಕಾತಿ ಪತ್ರವನ್ನು ನೀಡಲಾಯಿತು.