ವಿಜಯಪುರ: ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಬಡವರಿಗೆ ಹಂಚಿಕೆಯಾದ ಮನೆಗಳ ವಂತಿಗೆ ಹೆಚ್ಚಿಸಿದ್ದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಹೆಚ್ಚುವರಿ ಹಣವನ್ನು ಸರ್ಕಾರವೇ ಭರಿಸುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿರುವುದಾಗಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ನಗರದ ಬಡ ಕುಟುಂಬಗಳಿಗೆ ಈಗಾಗಲೇ ಮನೆ ಹಂಚಿಕೆ ಮಾಡಲಾಗಿದೆ. ಎಸ್ಸಿ, ಎಸ್ಟಿ ಹಾಗೂ ಇತರೆ ಹಿಂದುಳಿದ ವರ್ಗದ ಜನರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿ ಮನೆಗಳನ್ನು ನಿರ್ಮಿಸಲಾಗಿದೆ. 2016-17 ನೇ ಸಾಲಿನಲ್ಲಿ ರಾಜ್ಯ, ಕೇಂದ್ರ, ಸಂಘ ಸಂಸ್ಥೆಗಳ ಹಾಗೂ ಲಾನುಭವಿಗಳ ಪಾಲು ಅನುಪಾತದ ಸರಾಸರಿಯಲ್ಲಿ ಒಂದು ಮನೆಗೆ 4.50 ಲಕ್ಷ ರೂ.ಇದ್ದು, ಆದರೆ ಪ್ರಸ್ತುತ ಮನೆಗಳ ನಿರ್ಮಾಣದಲ್ಲಿ 2018-19 ರ ಪ್ರಕಾರ ರಾಜ್ಯ, ಕೇಂದ್ರ, ಸಂಘ ಸಂಸ್ಥೆಗಳ ಹಾಗೂ ಲಾನುಭವಿಗಳ ಪಾಲು ಅನುಪಾತದ ಸರಾಸರಿಯಲ್ಲಿ ಒಂದು ಮನೆಗೆ 5.87 ಲಕ್ಷ ರೂ. ಹೆಚ್ಚುವರಿ ಆಗಿದೆ. ರಾಜ್ಯ, ಕೇಂದ್ರ, ಸಂಘ ಸಂಸ್ಥೆಗಳ ಪಾಲುಗಾರಿಕೆಯಲ್ಲಿ ಹೆಚ್ಚಳವಾಗದೇ ಕೇವಲ ಬಡ ಲಾನುಭವಿಗಳ ಪಾಲುಗಾರಿಕೆಯಲ್ಲಿ 1.37 ಲಕ್ಷ ರೂ.ಹೆಚ್ಚಳವಾಗಿದೆ. ಇದು ಬಡವರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಬಡ ಲಾನುಭವಿಗಳ ಪಾಲುಗಾರಿಕೆಯಲ್ಲಿ ಹೆಚ್ಚಳವಾದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಸರಾಸರಿ ಅನುಪಾತದಲ್ಲಿ ನಿಭಾಯಿಸಿದಲ್ಲಿ ಜನಾಂಗದವರಿಗೆ ಅನುಕೂಲವಾಗುವುದು. ಈ ಬಗ್ಗೆ ಪ್ರಧಾನ ಮಂತ್ರಿಗಳ ಗಮನಕ್ಕೆ ಈಗಾಗಲೇ ತರಲಾಗಿದ್ದು ಶೀಘ್ರದಲ್ಲೇ ಸಕಾರಾತ್ಮಕ ಸ್ಪಂದನೆ ಸಿಗುವ ವಿಶ್ವಾಸವಿದೆ ಎಂದು ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.