ವಿಜಯಪುರ: ಲಾಭಾಂಶ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಡರೇಶನ್ ಆಫ್ ವೈನ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಕರೆ ಮೇರೆಗೆ ಮದ್ಯ ಮರಾಟಗಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದ ಪದಾಧಿಕಾರಿಗಳು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಧ್ಯಕ್ಷ ಅಶೋಕ ಮೋರೆ ಮಾತನಾಡಿ, 2009ರಲ್ಲಿ ಶೇ. 20ರಷ್ಟು ಲಾಭಾಂಶ ನೀಡಲಾಗುತ್ತಿತ್ತು. ಇಂದಿನ ಸರ್ಕಾರ ಅದನ್ನು ಶೇ. 10ಕ್ಕೆ ಇಳಿಸಿದೆ. 2009ರಲ್ಲಿ ಇದ್ದ ಒಟ್ಟು 8306 ಸನ್ನದುಗಳ ಸಂಖ್ಯೆ 11000 ದಾಟಿದೆ. ಮಾರಾಟದಲ್ಲಿ ಬಹಳಷ್ಟು ಏರಿಕೆ ಇಲ್ಲ. ಖರ್ಚುವೆಚ್ಚಗಳು 2 ಪಟ್ಟು ಹೆಚ್ಚಾಗಿವೆ. ಆದ್ದರಿಂದ ಲಾಭಾಂಶವನ್ನು ಮತ್ತೆ ಶೇ. 20ಕ್ಕೆ ಹೆಚ್ಚಿಸಬೇಕು ಎಂದರು.
ಎಲ್ಲಾ ರೂಪದ ಸನ್ನದುಗಳಿಗೆ ಏಕರೂಪ ಶುಲ್ಕ ವಿಧಿಸಬೇಕು. ಸಿಎಲ್ -7 ಪಾನೀಕರಿಗೆ ದರ್ಶಿನಿ ಹೋಟೆಲ್ ಮಾದರಿಯಲ್ಲಿ ನಿಂತು ಕುಡಿಯಲು ಅವಕಾಶ ಕಲ್ಪಿಸಬೇಕು. ಗ್ರಾಮೀಣ ಭಾಗಗಳಲ್ಲಿ ದಿನಸಿ ಅಂಗಡಿ, ಹೋಟೆಲ್ಗಳಲ್ಲಿ ಎಗ್ಗಿಲ್ಲದೇ ಮಾರಾಟಗೊಳ್ಳುತ್ತಿರುವ ಮದ್ಯಕ್ಕೆ ನಿಷೇಧ ಹೇರಬೇಕು. ಸಿಎಲ್-5 ಸನ್ನದುಗಳ ನಿಯಮಾವಳಿಗಳನ್ನು ಸರಳೀಕರಣಗೊಳಿಸಬೇಕು. ಅಬಕಾರಿ ಅಧಿಕಾರಿಗಳು ಲಂಚ ವಸೂಲಿಗಾಗಿ ನೀಡುತ್ತಿರುವ ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಮತ್ತು ಅವರ ಬೇನಾಮಿ ಆಸ್ತಿಗಳ ತನಿಖೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಾರ್ಯದರ್ಶಿ ಸಿದ್ದಯ್ಯ ಮಠ, ರಾಜು ಬಬಲೇಶ್ವರ, ನಾಗರಾಜ ಇಜೇರಿ, ಕಾಶಿನಾಥ ಮಸಬಿನಾಳ ಮತ್ತಿತರರಿದ್ದರು.