ವಿಜಯಪುರ: ಕೇಂದ್ರ ಸರ್ಕಾರ ಹೊರಡಿಸಿರುವ ಕಡ್ಡಾಯ ನಿವೃತ್ತಿ ಆದೇಶ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕರೆ ಹಿನ್ನೆಲೆ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಚಂದ್ರಶೇಖರ ಲೇಂಡಿ ಹಾಗೂ ಕಾರ್ಯದರ್ಶಿ ಸುರೇಶ ಜಿ.ಬಿ. ಮಾತನಾಡಿ, ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ರದ್ದುಗೊಳಿಸಿರುವ ಸರ್ಕಾರಿ ನೌಕರರ 18 ತಿಂಗಳ ತುಟ್ಟಿಭತ್ಯೆ ಹೆಚ್ಚಳ ಹಾಗೂ ಗಳಿಕೆ ರಜೆ ಸೌಲಭ್ಯ ಮತ್ತೆ ನೀಡಬೇಕು. ನಿಯಮ 56(ಜೆ)ರಡಿ ನೌಕರರೊಬ್ಬರು ಅಧ್ಯಕ್ಷತೆಯುಳ್ಳವರು ಅಥವಾ ಸಂಶಯಾತ್ಮಕ ನಡವಳಿಕೆ ಅಥವಾ ಇನ್ನಾವುದಾದರೂ ಕಾರಣದ ಮೇರೆಗೆ 30 ವರ್ಷ ಸೇವೆ ಪೂರೈಸಿರುವ ಅಥವಾ 5-55 ವರ್ಷ ಮೇಲ್ಪಟ್ಟ ನೌಕರರನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಕೈ ಬಿಡಬೇಕು. ಭಾರತೀಯ ಜೀವ ವಿಮಾ ನಿಗಮ ಸೇರಿ ಹಲವು ಸಾರ್ವಜನಿಕ ರಂಗದ ಉದ್ದಿಮೆಗಳ ಖಾಸಗೀರಕರಣ ಮಾಡಬಾರದು. ಕೂಡಲೇ ಜಿಎಸ್ಟಿ ಬಿಡುಗಡೆ ಮಾಡಬೇಕು. ಹಲವು ಕಾರ್ಮಿಕ ವಿರೋಧಿ ಮತ್ತು ರೈತ- ವಿರೋಧಿ ಮಸೂದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಚನ್ನಾರಡ್ಡಿ ಹೇಮಂಟಿ, ಎಸ್.ಜಿ. ಸಂಗಾಪುರ, ಮಂಜುನಾಥ ಭಂಟನೂರ, ಎಸ್.ವೈ.ಶಿಂಗೆ, ದುಂಡಪ್ಪ ಬಗಲಿ, ಸಂಜೀವ ಹೆಬ್ಬಿ, ಸಿದ್ರಾಮಯ್ಯ ಪೂಜಾರಿ, ಆರ್.ಎಸ್. ಮೆಣಸಗಿ ಮತ್ತಿತರರಿದ್ದರು.