ವಿಜಯಪುರ: ಕರೊನಾ ನೆಪದಲ್ಲಿ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರವೇಶ ನಿಷೇಧಿಸಿದ್ದನ್ನು ವಿರೋಧಿಸಿ ಶ್ರೀರಾಮ ಸೇನೆ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಲ್ಲಿನ ಸರ್ಕಾರದ ನಿರ್ಧಾರದಿಂದಾಗಿ ಅಯ್ಯಪ್ಪ ಸ್ವಾಮಿ ಕೋಟ್ಯಂತರ ಭಕ್ತರು ನಿರಾಶರಾಗಿದ್ದಾರೆ. ಕರ್ನಾಟಕದ ಅನೇಕ ಭಕ್ತರು ಮಾಲೆ ಧರಿಸಿ ವ್ರತಾಚರಣೆ ಕೈಗೊಳ್ಳುತ್ತಾರೆ. ಬಳಿಕ ಶಬರಿಮಲೈಗೆ ತೆರಳಿ ವ್ರತ ಪೂರ್ಣಗೊಳಿಸುತ್ತಾರೆ. ಆದರೆ, ಈ ಬಾರಿ ಸರ್ಕಾರ ನಿಷೇಧ ಹೇರಿದ್ದರಿಂದ ತೀವ್ರ ನೋವಾಗಿದೆ. ಈ ಕೂಡಲೇ ನಿಷೇಧ ತೆರವುಗೊಳಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಂಚಾಲಕ ರಾಕೇಶ ಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಕುಲಕರ್ಣಿ, ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಕಲ್ಯಾಣಪ್ಪಗೋಳ ಮತ್ತಿತರರಿದ್ದರು.