More

    ಮೂವರ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್

    ವಿಜಯಪುರ: ಮಲೇಷಿಯಾ ಮತ್ತು ಇಂಡೊನೇಷಿಯಾದಿಂದ ಜಿಲ್ಲೆಗೆ ಭೇಟಿ ನೀಡಿದವರೊಂದಿಗೆ ಸಂಪರ್ಕ ಸಾಧಿಸಿದ್ದವರ ಪೈಕಿ ಮೂವರ ಗಂಟಲು ದ್ರವ ಮಾದರಿ ಪರೀಕ್ಷೆ ನೆಗೆಟಿವ್ ಬಂದಿದ್ದು, ಇನ್ನೊಂದು ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳ ಸಭೆ ನಡೆಸಿದ ಅವರು, ದೆಹಲಿ ತಬ್ಲಿಘಿ ಸಾಮೂಹಿಕ ಪ್ರಾರ್ಥನೆಗೆ ಹೋಗಿ ಬಂದ 10 ಜನರ ಗಂಟಲು ದ್ರವ ಮಾದರಿ ಸಹ ಕಳುಹಿಸಲಾಗಿದೆ. ವರದಿ ಬರಬೇಕಿದೆ. ಅದರಂತೆ ಪೊಲೀಸ್ ಇಲಾಖೆಯ ಪ್ರಾಥಮಿಕ ಮಾಹಿತಿ ಅನ್ವಯ ದೆಹಲಿಯಿಂದ 17 ಜನ ವಿಜಯಪುರ ಜಿಲ್ಲೆಗೆ ಮಾ. 8 ರಂದು ಮರಳಿದ್ದು, ಇವರೆಲ್ಲರನ್ನು ಶಿಷ್ಟಾಚಾರ ಮತ್ತು ಮಾರ್ಗಸೂಚಿಯನ್ವಯ ಗೃಹಬಂಧನದಲ್ಲಿರಿಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

    ಕರೊನಾ ಪೀಡಿತ ಜಿಲ್ಲೆ ಮತ್ತು ರಾಜ್ಯಗಳಿಂದ ಜಿಲ್ಲೆಗೆ ಬಂದವರ ಬಗ್ಗೆ ತಕ್ಷಣ ಜಿಲ್ಲಾಡಳಿತ ಗಮನಕ್ಕೆ ತರಬೇಕು. ಸಾರ್ವಜನಿಕರ ಮತ್ತು ಜಿಲ್ಲೆಯ ಜನತೆಯ ಹಿತದೃಷ್ಟಿಯಿಂದ ಕರೊನಾ ನಿಯಂತ್ರಣಕ್ಕೆ ಅನಗತ್ಯವಾಗಿ ಮನೆಯಿಂದ ಹೊರಗೆ ಬರದೆ ಜಿಲ್ಲಾಡಳಿತಕ್ಕೆ ಸಹಕರಿಸಲು ಮನವಿ ಮಾಡಿದರು.

    ಸರ್ಕಾರವು ಘೋಷಿತ ಮತ್ತು ಅಘೋಷಿತ ಕೊಳಚೆ ನಿವಾಸಿಗಳು, ಕಟ್ಟಡ ಕಾರ್ಮಿಕರ ವಸತಿ ತಾಣಗಳು ಹಾಗೂ ವಲಸಿಗ ಕಾರ್ಮಿಕರಿಗೆ ಏ.14ರವರೆಗೆ ಪ್ರತಿಕುಟುಂಬಕ್ಕೆ ಹಾಲು ವಿತರಿಸಬೇಕು. ಜಿಲ್ಲೆಯ 82668 (20 ಸಾವಿರ ಕುಟುಂಬಗಳು) ಸ್ಲಂ ನಿವಾಸಿಗಳಿಗೆ ಎಸ್‌ಎಚ್‌ಜಿ ಗುಂಪುಗಳ ಮೂಲಕ ಅಥವಾ ಅವಶ್ಯಕ ಮೂಲಗಳ ಮುಖಾಂತರ ಹಾಲು ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಜಿಲ್ಲಾದ್ಯಂತ 2 ತಿಂಗಳ ಪಡಿತರ ಅಕ್ಕಿ, ಗೋಧಿ ಮತ್ತು ಆಹಾರ ಧಾನ್ಯಗಳನ್ನು ಅರ್ಹ ಬಿಪಿಎಲ್ ಕುಟುಂಬಗಳಿಗೆ ಪೂರೈಸಬೇಕು. ಅದರಂತೆ ಅಂತ್ಯೋದಯ ಪಡಿತರ ಚೀಟಿದಾರರಿಗೆ ನಿಗದಿತ ಪ್ರಮಾಣದ ಆಹಾರ ಧಾನ್ಯ ಪೂರೈಸುವಂತೆ ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದ ಅವರು, ಸಾರ್ವಜನಿಕರು ಕೂಡ ಗುಂಪು-ಗುಂಪಾಗಿ ಪಡೆಯದೆ, ಸಾಮಾಜಿಕ ಅಂತರದೊಂದಿಗೆ ಪಡೆಯಬೇಕೆಂದು ತಿಳಿಸಿದರು.
    ಪಡಿತರಕ್ಕೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಆಯಾ ತಹಸೀಲ್ದಾರರು ಅಥವಾ ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ಅಥವಾ ಅನಿವಾರ್ಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ಅರ್ಹ ಲಾನುಭವಿಗಳಿಗೆ ತಲಾ 2 ಸಾವಿರ ಮತ್ತು ಪ್ರಧಾನಮಂತ್ರಿ ಜನ-ಧನ ಯೋಜನೆಯಡಿ 500 ರೂ. ಒದಗಿಸುತ್ತಿದ್ದು, ಪ್ರತಿ ಗ್ರಾಮದಲ್ಲಿ ಬ್ಯಾಂಕ್ ಮಿತ್ರರು ಲಾನುಭವಿಗಳೊಂದಿಗೆ ಸಮನ್ವಯತೆ ಸಾಧಿಸಲಿದ್ದಾರೆ. ಸಾರ್ವಜನಿಕರು ಕೂಡ ಬ್ಯಾಂಕ್ ಮತ್ತು ಎಟಿಎಂಗಳಿಗೆ ಗುಂಪು-ಗುಂಪಾಗಿ ಹೋಗದಂತೆ ಅವರು ಸಲಹೆ ನೀಡಿದರು.

    ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ವೇತನವನ್ನು ಏ. 1ರಿಂದ 275 ರೂ.ವರೆಗೆ ಸರ್ಕಾರ ಹೆಚ್ಚಿಸಿದ್ದು, ವೈಯಕ್ತಿಕ ಕೃಷಿ ಹೊಂಡ, ಬದು ನಿರ್ಮಾಣ, ಸಾಮೂಹಿಕ ಕಾರ್ಯಗಳಿಗೆ ಕೇವಲ 5 ಜನರ ಗುಂಪಿನೊಂದಿಗೆ ಕೆಲಸ ನಿರ್ವಹಿಸಲು ಸರ್ಕಾರ ಸೂಚಿಸಿದೆ ಎಂದು ಅವರು ತಿಳಿಸಿದರು.

    ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪಸೆ, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರ ಚಿಕ್ಸಿತಕ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಲ್ಲನಗೌಡ ಬಿರಾದಾರ, ಕುಷ್ಠರೋಗ ನಿಯಂತ್ರಣಾಧಿಕಾರಿ ಸಂಪತ್‌ಕುಮಾರ ಗುಣಾರೆ, ಡಾ. ಧಾರವಾಡಕರ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಮತ್ತಿತರರಿದ್ದರು.

    ಸೋಮವಾರ ಮಧ್ಯಾಹ್ನದವರೆಗೆ 337 ಜನ ವಿದೇಶದಿಂದ ಬಂದ ಬಗ್ಗೆ ವರದಿಯಾಗಿದೆ. 93 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 216 ಜನರು 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 28 ಜನ ಗೃಹಬಂಧನದಲ್ಲಿದ್ದಾರೆ. ವಿದೇಶದಿಂದ ಬಂದವರನ್ನು ಹೊರತುಪಡಿಸಿ 11 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 16 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. 1ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬರಬೇಕಾಗಿದೆ.
    ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ

    ಮೂವರ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್
    ಮೂವರ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts