ವಿಜಯಪುರ: ಭಾಷೆಯ ಉಗಮವೇ ಕಲೆ. ಕಲೆ ಎಲ್ಲರಿಗೂ ಅರ್ಥವಾಗುವ ಭಾಷೆ. ಹೀಗಾಗಿ ಕಲೆಗೆ ಬೆಲೆ ಕಟ್ಟಲಾಗದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ನಗರದ ಹಳೇ ಪ್ರವಾಸಿ ಮಂದಿರದ ಆರ್ಟ್ ಗ್ಯಾಲರಿಯಲ್ಲಿ ನಡೆದ ಆರ್ಟ್ ಫೋಟೋಗ್ರಾಫಿ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಾಗರಿಕತೆ ಬೆಳೆದು ಬಂದಿದ್ದೇ ಕಲೆಯ ಮೂಲಕ. ಅಕ್ಷರ, ಭಾಷೆ ಹುಟ್ಟುವ ಮೊದಲೇ ಚಿತ್ರಕಲೆ ಉಗಮವಾಗಿತ್ತು. ಇಂದಿಗೂ ಚಿತ್ರಕಲೆಗಳ ಮೂಲಕವೇ ಸಾಕಷ್ಟು ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಇತಿಹಾಸ ತಿಳಿಯುವ ಪ್ರಯತ್ನ ನಡೆಯುತ್ತಿದೆ. ರಾಜಮಹಾರಾಜರೆಲ್ಲರೂ ಕಲೆಯನ್ನು ಪೋಷಿಸುತ್ತಿದ್ದರು. ಕಲಾವಿದರಿಗೆ ಆಶ್ರಯ ನೀಡಿದ್ದರು. ಇಂದಿಗೂ ಕಲೆಯನ್ನು ಪ್ರೀತಿಸದವರಿಲ್ಲ ಎಂದರು.
ಮಹಾಂತೇಶ ಬಿರಾದಾರ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಭಜಂತ್ರಿ, ಲಲಿತ ಕಲಾ ಅಕಾಡೆಮಿ ಸದಸ್ಯ ರಮೇಶ ಚವಾಣ್, ಮಹೇಶ ಕ್ಯಾತನ್, ವಿ.ವಿ. ಹಿರೇಮಠ, ಡಾ. ಶಶಿಕಲಾ ಹೂಗಾರ, ಎಸ್.ಎ.ಪಾಟೀಲ, ಕಮಲೇಶ ಭಜಂತ್ರಿ, ನಿಂಗರಾಜ್ ಕಾಶಪುರ, ಪಿಂಕೂ ಶಹ, ಎ.ಎಚ್. ಕಾಖಂಡಕಿ, ರವಿಕಿರಣ ಬದಾಮಿ ಮತ್ತಿತರರಿದ್ದರು. ಮಂಜುನಾಥ ಮಾನೆ ನಿರೂಪಿಸಿದರು. ರಮೇಶ ಚವಾಣ್ ವಂದಿಸಿದರು.
ಕಲಾವಿದರಾದ ಅಶೋಕ ಮನ್ಸೂರ, ಪ್ರಮೋದ ಸ್ಟೀಪನ್, ಇಂದ್ರಕುಮಾರ ದಸ್ತೆನ್ನವರ, ನವೀನಕುಮಾರ ಪುತ್ತೂರ, ಸಂತೋಷ ಹಂಜಗಿ, ವೈಭವ, ರವಿಕಿರಣ ಬದಾಮಿ ಅವರ ಏಳು ವಿಧದ 80 ಫೋಟೋಗಳು ಪ್ರದರ್ಶನಗೊಂಡವು.