ವಿಜಯಪುರ: ಜ್ಞಾನಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ಜಗತ್ತಿನಲ್ಲಿ ನಾವು ಪಡೆದ ಅಧಿಕಾರವನ್ನು, ಗಳಿಸಿದ ಆಸ್ತಿಯನ್ನು ಯಾರು ಬೇಕಾದರೂ ಕಿತ್ತುಕೊಳ್ಳಬಹುದು, ಆದರೆ ಜ್ಞಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಅಮ್ಮನ ಮಡಿಲು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಬಬಲೇಶ್ವರ ತಾಲೂಕಿನ ಮಮದಾಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ ಜ್ಞಾನ ಜೋಳಿಗೆಯ ಮೂಲಕ ಸಂಗ್ರಹಗೊಂಡ ಪುಸ್ತಕಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಓದು ನೀಡುವ ಆತ್ಮತೃಪ್ತಿ, ಚೈತನ್ಯವನ್ನು ಜಗತ್ತಿನ ಯಾವುದೇ ವಸ್ತುವಿನಿಂದ ಪಡೆಯಲಾಗದು. ಅದಕ್ಕಾಗಿ ತಾವು ಒಳ್ಳೆಯ ಓದುಗರಾಗಬೇಕು. ನೀವು ಓದಿ ಮುಗಿಸಿದ ನಂತರ ಆ ಪುಸ್ತಕವನ್ನ ಇನ್ನೊಬ್ಬರಿಗೆ ಓದಲು ಕೊಡಿ, ಅದರಿಂದ ಜ್ಞಾನವನ್ನು ಇನ್ನೊಬ್ಬರಿಗೆ ಹಂಚಿದ ಪುಣ್ಯ ನಿಮಗೆ ಲಭಿಸುತ್ತದೆ ಎಂದು ತಿಳಿಸಿದರು.
ಮಮದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗವ್ವ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಉಪಾಧ್ಯಕ್ಷ ಲಕ್ಷ್ಮಣ ತೇಲಿ, ಕೃಷಿ ಪ್ರಾಥಮಿಕ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಗಲಗಲಿ, ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇದಮೂರ್ತಿ ಸದಾಶಿವಯ್ಯ ಕಾಖಂಡಕಿ ಮಠ ಪಾಲ್ಗೊಂಡಿದ್ದರು.