ಬೈಲಹೊಂಗಲ: ಗ್ರಾಮೀಣ ಪ್ರದೇಶದ ಜನತೆಯ ಶ್ರೇಯೋಭಿವೃದ್ಧಿಗಾಗಿ ಭವ್ಯವಾದ ಆಯುರ್ವೇದ ಆಸ್ಪತ್ರೆ ಪ್ರಾರಂಭಿಸಿದ್ದಲ್ಲದೆ ಅಧ್ಯಾತ್ಮದ ಸಾರ ಉಣಬಡಿಸುತ್ತ ಜನತೆಯ ಕಲ್ಯಾಣಕ್ಕಾಗಿ ಕಳೆದ 30 ವರ್ಷಗಳಿಂದ ಶ್ರಮಿಸುತ್ತಿರುವ ವಿಜಯಾನಂದ ಸ್ವಾಮೀಜಿ ಸಮಾಜ ಸೇವೆ ಅವಿಸ್ಮರಣೀಯವಾಗಿದೆ ಎಂದು ಮುಂಬಯಿ ಉದ್ಯಮಿ ಸುಭಾಷ ಅಮೀನ ಹೇಳಿದರು.
ವಿಜಯಾನಂದ ಸ್ವಾಮೀಜಿ ಅವರ 70ನೇ ಜನ್ಮದಿನದ ನಿಮಿತ್ತ ತಾಲೂಕಿನ ಬೇವಿನಕೊಪ್ಪ ಗ್ರಾಮದ ಆನಂದ ಆಶ್ರಮದಲ್ಲಿ ಭಕ್ತರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಆನಂದ ಆಶ್ರಮದ ವಿಜಯಾನಂದ ಸ್ವಾಮೀಜಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ವಿಜ್ಞಾನದಲ್ಲಿ ಬಹಳ ಮುಂದುವರೆದಿದೆ. ಯಂತ್ರೋಪಕರಣಗಳಿಂದ ಅನೇಕ ಲಾಭಗಳು ನಮ್ಮದಾಗುತ್ತಿವೆ. ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಎಲ್ಲರನ್ನು ಜೋಡಿಸುವ ಕೆಲಸ ನಮ್ಮಿಂದ ನಡೆಯಬೇಕು ಒಂದು ಭಾಷೆಯ ಮೇಲಿನ ಪ್ರೀತಿ ಇನ್ನೊಂದು ಭಾಷೆಯ ದ್ವೇಷಕ್ಕೆ ಕಾರಣವಾಗಬಾರದು. ಪ್ರತಿಯೊಬ್ಬರನ್ನು ಪ್ರೀತಿಸುವುದೆ ಮಾನವ ಧರ್ಮದ ಉದ್ದೇಶವಾಗಿದೆ. ಬಸವಣ್ಣ, ಶಿರಡಿ ಸಾಯಿಬಾಬಾ, ನಿತ್ಯಾನಂದರು ಇದನ್ನೆ ಪ್ರತಿಪಾದಿಸಿದ್ದಾರೆ. ಗುರು ತತ್ತ್ವ ನಮ್ಮ ದೇಶಕ್ಕೆ ಅವಶ್ಯವಾಗಿದೆ. ಹಿಂಸೆ, ದ್ವೇಷ ಅಲ್ಲ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಮೋಹನ ಆಚಾರ್ಯ, ಶೋಭಾ ಸಿದ್ನಾಳ ಮಾತನಾಡಿ, ಸರ್ವಧರ್ಮ ಸಮ್ಮೇಳನ ನಡೆಸಿದ್ದಲ್ಲದೆ, ಗೋರಕ್ಷಣೆಗಾಗಿ ಪಾದಯಾತ್ರೆ ಕೈಗೊಂಡಿದ್ದಾರೆ. ದೇಶ, ಹೊರದೇಶದ ಅಪಾರ ಭಕ್ತರನ್ನು ಹೊಂದಿರುವ ವಿಜಯಾನಂದ ಶ್ರೀಗಳ ಪರಿಶ್ರಮದಿಂದ ಮಲಪ್ರಭಾ ನದಿಗೆ ಸಂಗೊಳ್ಳಿ- ಬೇವಿನಕೊಪ್ಪ ಸೇತುವೆ ಮಂಜೂರು ಆಗಿದೆ ಎಂದರು.
ಬೆಳಗ್ಗೆ 6ಕ್ಕೆ ಭಗವಾನ ನಿತ್ಯಾನಂದರ ಪಾದುಕಾ ಪೂಜೆ ಹಾಗೂ ಅಖಂಡ ನಾಮ ಸ್ಮರಣೆ ಜರುಗಿತು. ವಿಜಯಾನಂದ ಶ್ರೀಗಳ ಜನ್ಮದಿನದ ಅಂಗವಾಗಿ ಭಕ್ತವೃಂದ ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು, ಹಾಲು ವಿತರಿಸಿದರು.
ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಆನಂದಾಶ್ರಮದ ಹೊಸ ಆ್ಯಪ್ ಬಿಡುಗಡೆ, ಬಾಲಭೋಜನ ಹಾಗೂ ಅನ್ನಸಂತರ್ಪಣೆ, ಶ್ರೀ ನಿತ್ಯಾನಂದ ಆರೋಗ್ಯಧಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಿಯಾಯಿತಿ ದರದಲ್ಲಿ ಔಷಧಗಳ ವಿತರಣೆ ಕಾರ್ಯಕ್ರಮ ಜರುಗಿತು. ನಿವೃತ್ತ ಮುಖ್ಯ ಇಂಜಿನಿಯರ್ ರಮೇಶ ಜಂಗಲ, ಪುಷ್ಪಲರೆಡ್ಡಿ, ಮೋಹನ ವಾರ, ಮಡಿವಾಳಪ್ಪ ಅಂಗಡಿ, ಮಂಜುನಾಥ ಬನ್ನೂರ, ಮಹಾರುದ್ರಪ್ಪ ಸಂಪಗಾಂವಿ, ಮಲ್ಲಿಕಾರ್ಜುನ ಪೂಜೇರ, ಗೋರೇಸಾಬ ನದಾಫ, ಬಸವರಾಜ ವಾಲಿ, ಡಾ. ಅನುಪಮಾ ಡಾಕೋಜಿ ಹಾಗೂ ಸಾವಿರಾರು ಭಕ್ತರು ಇದ್ದರು.
ಅನ್ನ ಇಲ್ಲದವರಿಗೆ ಅನ್ನ ಹಾಕುವ ಸಂಸ್ಕೃತಿ ನಮ್ಮದು. ಯುವಕರನ್ನು ಆರ್ಥಿಕವಾಗಿ, ಸಂಸ್ಕಾರಯುತವಾಗಿ ಬಲಾಢ್ಯ ಮಾಡಲು ಸರ್ಕಾರ ಹಾಗೂ ಸಂಘ- ಸಂಸ್ಥೆಗಳು ಶ್ರಮಿಸಬೇಕು.
| ವಿಜಯಾನಂದ ಸ್ವಾಮೀಜಿ ಬೇವಿನಕೊಪ್ಪ ಆನಂದ ಆಶ್ರಮ