More

    ಬಂಗಾರದಂತಹ ಜೀವನ ಸಾಗಿಸೋಣ

    ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಹಿರಿಯರು-ಕಿರಿಯರೆನ್ನದೇ ಬನ್ನಿ ಪತ್ರಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯದಶಮಿ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ನವರಾತ್ರಿ ಆರಂಭದಿಂದ ನಸುಕಿನ ಜಾವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದ ಮಹಿಳೆಯರು ಸೋಮವಾರ ಮುತೆôದೆಯರಿಗೆ ಉಡಿ ತುಂಬಿ ಹರಸಿದರು.

    ನವರಾತ್ರಿ ಉತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ನಿರಂತರವಾಗಿ ಸಾಗಿಬಂದ ಆದಿಶಕ್ತಿ ಕುರಿತಾದ ಪುರಾಣ ಪ್ರವಚನಗಳು ಮಂಗಲಗೊಂಡವು. ಸೋಮವಾರ ಬೆಳಗ್ಗೆಯಿಂದಲೇ ನಗರದ ವಿವಿಧ ದೇವಸ್ಥಾನಗಳಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನವರಾತ್ರಿ ಉತ್ಸವದ ಕೊನೆಯ ದಿನ ದೇವಸ್ಥಾನದ ಆವರಣದಲ್ಲಿರುವ ಬನ್ನಿಗಿಡ ಇರುವ ಸ್ಥಳಗಳಲ್ಲಿ ವೇದಿಕೆ ನಿರ್ವಿುಸಿ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಲಾಯಿತು.

    ತೋಂಟದಾರ್ಯ ಮಠದ ಆವರಣ, ಶಂಕರಲಿಂಗ ದೇವಸ್ಥಾನ, ರಾಜೀವಗಾಂಧಿ ನಗರದ ಬನ್ನಿಮಹಾಂಕಾಳಿ ದೇವಸ್ಥಾನ, ವಿವೇಕಾನಂದನಗರದ ಮಜಣೆತ ದೇವಸ್ಥಾನ, ಕರಿಯಮ್ಮನಕಲ್ಲು ಬಡಾವಣೆಯ ಕರಿಯಮ್ಮ ದೇವಸ್ಥಾನ, ಬೆಟಗೇರಿ ಟರ್ನಲ್ ಪೇಟೆ, ರಂಗಪ್ಪಜ್ಜನಮಠದ ಮುಂಭಾಗ, ನರಸಾಪೂರ ಬಸ್ ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿನ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಂಗಾರದಂತಹ ಜೀವನ ಸಾಗಿಸೋಣ ಎಂದು ಸಾರ್ವಜನಿಕರು ಪರಸ್ಪರ ಬನ್ನಿ ಪತ್ರಿ ವಿನಿಮಯ ಮಾಡಿಕೊಂಡರು. ಕಿರಿಯರು ಹಿರಿಯರಿಗೆ ಬನ್ನಿ ಪತ್ರಿ ನೀಡಿ ಆಶೀರ್ವಾದ ಪಡೆದರು. ವಿಜಯದಶಮಿ ಹಬ್ಬದಂದು ಖರೀದಿಸಿದ ವಸ್ತುಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಲ್ಲಿ ಸಾರ್ವಜನಿಕರು ವಾಹನ, ಇಲೆಕ್ಟ್ರಾನಿಕ್ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಿದರು.

    ವಿಶೇಷ ಪೂಜೆ: ನಗರದ ಪ್ರಮುಖ ದೇವಸ್ಥಾನಗಳಾದ ಹಳೇ ಸರಾಫ್ ಬಜಾರ್​ನ ಜಗದಂಬಾ ದೇವಸ್ಥಾನ, ಗಂಗಾಪೂರಪೇಟೆಯ ದುರ್ಗಾದೇವಿ ದೇವಸ್ಥಾನ, ಹುಡ್ಕೋ ಕಾಲನಿಯ ತುಳಜಾಭವಾನಿ ದೇವಸ್ಥಾನ, ಬೆಟಗೇರಿಯ ಅಂಬಾಭವಾನಿ ದೇವಸ್ಥಾನ, ಹಳೇಬನಶಂಕರಿ ದೇವಸ್ಥಾನ, ಶಿವಶರಣೆ ನೀಲಮ್ಮತಾಯಿ ಅಸುಂಡಿ ಆಧ್ಯಾತ್ಮ ವಿದ್ಯಾಶ್ರಮ, ರಾಜೀವಗಾಂಧಿ ನಗರದ ಶ್ರೀದೇವಿ ದೇವಸ್ಥಾನ, ಹರ್ಲಾಪೂರದ ದಾನಮ್ಮದೇವಿ ದೇವಸ್ಥಾನ, ಡೋಹರ ಗಲ್ಲಿಯ ಶ್ರೀದೇವಿ ದೇವಸ್ಥಾನ, ಅಮರೇಶ್ವರ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ, ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೆಶ್ವರಿ ಮಂದಿರ ಹಾಗೂ ಅಕ್ಕನ ಬಳಗದಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ಜರುಗಿತು.

    ಆಯುಧ ಪೂಜೆ: ಜಿಲ್ಲಾದ್ಯಂತ ಭಾನುವಾರ ಆಯುಧ ಪೂಜೆ ಆಚರಿಸಲಾಯಿತು. ಬೆಳಗ್ಗೆ ಮನೆಯಲ್ಲಿನ ಆಯುಧ ಹಾಗೂ ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿ, ಜೋಳದ ಹಾಗೂ ಚೆಂಡು ಹೂವಿನ ದಂಟು, ಕಬ್ಬು, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ವಿವಿಧ ಉದ್ದಿಮೆದಾರರು ತಾವು ಉಪಯೋಗಿಸುವ ವಾಹನ, ಯಂತ್ರೋಪಕರಣ, ಆಯುಧಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು.

    ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಸಂಜೆ ನಗರದ ಭೀಷ್ಮ ಕೆರೆ ಆವರಣದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನ ಬಯಲಿಗೆ ಆಗಮಿಸಿದವು. ಅಲ್ಲಿನ ಬನ್ನಿ ಗಿಡಕ್ಕೆ ವೀರ ನಾರಾಯಣ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸಿದರು. ಬನ್ನಿ ಮುಡಿದ ನಂತರ ಹಲವು ಗಣ್ಯರು ಕೆರೆ ಆವರಣದಲ್ಲಿಯೇ ಬನ್ನಿ ವಿನಿಮಯ ಮಾಡಿಕೊಂಡು ಪರಸ್ಪರ ಶುಭಾಶಯ ಕೋರಿದರು. ನಗರದ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ ಅವರು ಸಂಜೆ ಭಕ್ತರಿಗೆ ಬನ್ನಿ ನೀಡಿ ಆಶೀರ್ವದಿಸಿದರು.

    ದಿಢೀರ್ ಪೊಲೀಸ್ ದಾಳಿಯಿಂದ ಕಂಗೆಟ್ಟು ಕದ್ದ ಮೊಬೈಲ್​ಗಳನ್ನು ಬಿಟ್ಟು ಪರಾರಿಯಾದ್ರು ಕಳ್ಳರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts