ಗುಜರಾತ್: ಅಹಮದಾಬಾದ್ನ ಜಮಲಪುರ್-ಖಾಡಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಮ್ರಾನ್ ಖೇಡವಾಲಾ ಅವರಲ್ಲಿ ಕರೊನಾ ವೈರಸ್ ದೃಢಪಟ್ಟಿದ ಬೆನ್ನಲ್ಲೇ, ಅವರ ಸಂಪರ್ಕಕ್ಕೆ ಹೋದ ಹಲವು ರಾಜಕೀಯ ಮುಖಂಡರಿಗೂ ಆತಂಕ ಶುರುವಾಗಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯವರು ಮಂಗಳವಾರ ಕರೆದಿದ್ದ ಎಲ್ಲ ಕ್ಷೇತ್ರಗಳ ಶಾಸಕರ ಸಭೆಯಲ್ಲಿ ಇಮ್ರಾನ್ ಪಾಲ್ಗೊಂಡಿದ್ದರು. ಅದರಲ್ಲಿ ಉಪಮುಖ್ಯಮಂತ್ರಿ, ಗೃಹಸಚಿವ ಸೇರಿ ಹಲವು ರಾಜಕೀಯ ಮುಖಂಡರು ಭಾಗವಹಿಸಿದ್ದರು. ಇದೀಗ ಎಲ್ಲರಿಗೂ ಕರೊನಾ ಭೀತಿ ಆವರಿಸಿದೆ.
ಮುಖ್ಯಮಂತ್ರಿ ವಿಜಯ್ ರೂಪಾನಿಯವರಿಗೆ ಇಂದು ಬೆಳಗ್ಗೆ ಕರೊನಾ ತಪಾಸಣೆ ನಡೆಸಲಾಗಿದ್ದು, ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೂ ರೂಪಾನಿ ಅವರು ಒಂದು ವಾರಗಳ ಕಾಲ ಸೆಲ್ಫ್ ಐಸೋಲೇಟ್ ಆಗಲಿದ್ದಾರೆ.
ಮುಂದಿನ ಒಂದು ವಾರದಲ್ಲಿ ನಿಗದಿಯಾಗಿದ್ದ ಎಲ್ಲ ಸಭೆಗಳನ್ನೂ ಮುಂದೂಡುವಂತೆ ತಿಳಿಸಿದ್ದಾರೆ. ರಾಜ್ಯದ ಆಡಳಿತಕ್ಕೆ ಸಂಬಂಧಪಟ್ಟಂತೆ ಆಯಾ ಅಧಿಕಾರಿಗಳು, ಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿದಿನ ಚರ್ಚೆ ನಡೆಸಲಿದ್ದಾರೆ.
ಮಂಗಳವಾರ ಸಂಜೆ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಮ್ಮ ಗಾಂಧಿನಗರದ ನಿವಾಸದಲ್ಲಿ ಸಭೆ ನಡೆಸಿದ್ದರು. ಅದರಲ್ಲಿ ಇಮ್ರಾನ್ ಸೇರಿ ಹಲವು ಶಾಸಕರು ಪಾಲ್ಗೊಂಡಿದ್ದರು. ಆದರೆ ಇಂದು ಅವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.
ಅಹಮದಾಬಾದ್ನಲ್ಲಿ ಕರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲಿ ಹಲವು ಪ್ರದೇಶಗಳನ್ನು ಹಾಟ್ಸ್ಫಾಟ್ ಎಂದು ಗುರುತಿಸಿ ನಿರ್ಭಂಧ ವಿಧಿಸಲಾಗಿದೆ. (ಏಜೆನ್ಸೀಸ್)
ಕಾಂಗ್ರೆಸ್ ಶಾಸಕನಿಗೆ ಕರೊನಾ ಸೋಂಕು; ಅವರನ್ನು ಸಂಪರ್ಕಿಸಿದವರಿಗೆಲ್ಲ ಆತಂಕ…ಸಿಎಂಗೂ ಶುರುವಾಗಿದೆ ಭಯ..!