ನವದೆಹಲಿ: ಭಾರತದಲ್ಲಿನ ಹಲವು ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿ ಲಂಡನ್ಗೆ ಪರಾರಿಯಾಗಿರುವ ವಾಣಿಜ್ಯೋದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಲ್ಲಿ ವಿಳಂಬವಾಗಲಿದೆ. ಅವರ ಹಸ್ತಾಂತರ ಪ್ರಕ್ರಿಯೆಯಲ್ಲಿ ಕಾನೂನು ತೊಡಕೊಂದು ಕಾಣಿಸಿಕೊಂಡಿರುವುದು ಇದಕ್ಕೆ ಕಾರಣ ಎಂದು ಬ್ರಿಟನ್ ಸರ್ಕಾರ ಸ್ಪಷ್ಟಪಡಿಸಿದೆ.
ಆ ಕಾನೂನು ತೊಡಕು ತುಂಬಾ ಗೌಪ್ಯವಾದದ್ದು. ಉಭಯ ರಾಷ್ಟ್ರಗಳೊಂದಿಗಿನ ಅಪರಾಧಿಗಳ ವಿನಿಮಯ ಒಪ್ಪಂದದನ್ವಯ ಈ ಕಾನೂನು ತೊಡಕು ನಿವಾರಣೆಯಾಗದ ಹೊರತು ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ. ಆ ತೊಡಕು ನಿವಾರಣೆಗೊಳಿಸಿಕೊಳ್ಳುವಲ್ಲಿ ಹಲವು ತಿಂಗಳು, ವರ್ಷಗಳೇ ಬೇಕಾಗಬಹುದು. ಆದರೂ ಅದನ್ನು ತ್ವರಿತವಾಗಿ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬ್ರಿಟನ್ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಭಾರತದ ಬ್ಯಾಂಕ್ಗಳಿಗೆ ವಂಚಿಸಿ ಲಂಡನ್ಗೆ ಪರಾರಿಯಾಗಿದ್ದ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್ ಹೈಕೋರ್ಟ್ ಆದೇಶ ಹೊರಡಿಸಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಮಲ್ಯ ಅವರ ಪ್ರಯತ್ನ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬ್ರಿಟನ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸುತ್ತದೆ ಎಂದೇ ಹೇಳಲಾಗುತ್ತಿತ್ತು.