ಕೊಚ್ಚಿ: ರಾಷ್ಟ್ರೀಯ ಸ್ವಯಂ ಸೇವಕಸಂಘ(ಆರೆಸ್ಸೆಸ್)ದ ಅತ್ಯಂತ ಹಿರಿಯ ಪ್ರಚಾರಕರಲ್ಲಿ ಒಬ್ಬರಾಗಿದ್ದ ಪಿ.ಪರಮೇಶ್ವರನ್(91) ಭಾನುವಾರ ನಸುಕಿನಲ್ಲಿ ಅಸ್ತಂಗತರಾಗಿದ್ದಾರೆ.
ಭಾರತೀಯ ವಿಚಾರ ಕೇಂದ್ರಮ್ನ ಸಂಸ್ಥಾಪಕ ನಿರ್ದೇಶಕರಾಗಿದ್ದ ಅವರು, ಪಾಲಕ್ಕಾಡಿನ ಒಟ್ಟಪಾಲಂನಲ್ಲಿ ವಯೋಸಹಜ ಕಾಯಿಲೆಗಳಿಗೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ನಸುಕಿನ 12.10ಕ್ಕೆ ಅವರು ಕೊನೆಯುಸಿರೆಳೆದರು ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.
ಪರಮೇಶ್ವರನ್ ಅವರು ಜನಸಂಘದಲ್ಲಿ ಇದ್ದಾಗ ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಮುಂತಾದವರೊಂದಿಗೆ ರಾಷ್ಟ್ರ ಸೇವೆ ಮಾಡಿದ್ದರು. ಸಂಘ ಪರಿವಾರ ಮತ್ತು ಭಾರತೀಯ ಜನತಾ ಪಾರ್ಟಿ ವಲಯದಲ್ಲಿ ಪ್ರೀತಿಯಿಂದ ಪರಮೇಶ್ವರ್ ಜೀ ಎಂದೇ ಗೌರವಿಸಲ್ಪಡುತ್ತಿದ್ದವರು. ಅವರು 1967-71ರ ತನಕ ಭಾರತೀಯ ಜನಸಂಘದ ಕಾರ್ಯದರ್ಶಿ, 1971-77ರ ತನಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಂತರ 1977-82ರ ತನಕ ದೀನ್ದಯಾಳ್ ರೀಸರ್ಚ್ ಇನ್ಸ್ಟಿಟ್ಯೂಟ್ನ ನಿರ್ದೇಶಕರಾಗಿ ದೆಹಲಿಯಲ್ಲಿ ಕೆಲಸ ಮಾಡಿದ್ದರು. 1982 ರಲ್ಲಿ ಭಾರತೀಯ ವಿಚಾರ ಕೇಂದ್ರಮ್ ಸ್ಥಾಪಿಸಿದ ಅವರು, ಅದರ ಮೂಲಕ ಕೇರಳೀಯರಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದ್ದರು. ಆಲಪ್ಪುಳ ಜಿಲ್ಲೆಯ ಮುಹಮ್ಮಾ ಎಂಬಲ್ಲಿ 1927ರಲ್ಲಿ ಅವರು ಜನಿಸಿದರು. ವಿದ್ಯಾರ್ಥಿ ದಿನಗಳಿಂದಲೇ ಆರೆಸ್ಸೆಸ್ ಕಾರ್ಯಕರ್ತರಾಗಿದ್ದವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 16 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು ಕೂಡ. ಅವರು 2004ರಲ್ಲಿ ಪದ್ಮಶ್ರೀ, 2014ರಲ್ಲಿ ಪದ್ಮವಿಭೂಷಣ ಪುರಸ್ಕಾರಕ್ಕೆ ಭಾಜನರಾಗಿದ್ದರು.
ಅವರ ಅಂತ್ಯ ಸಂಸ್ಕಾರ ಹುಟ್ಟೂರು ಮುಹಮ್ಮಾದಲ್ಲೇ ಸಂಜೆ ನಡೆಯಲಿದ್ದು, ಅದಕ್ಕೂ ಮೊದಲು ಕೊಚ್ಚಿಯಲ್ಲಿರುವ ಆರಸ್ಸೆಸ್ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ ಎಂದು ಸಂಘದ ಮೂಲಗಳು ತಿಳಿಸಿವೆ. (ಏಜೆನ್ಸೀಸ್)