ಬೆಂಗಳೂರು: ಲಾಕ್ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಪ್ತಿ ಮಾಡಲಾಗಿರುವ ವಾಹನಗಳನ್ನು ಠಾಣೆ ಹಂತದಲ್ಲೇ ದಂಡ ಪಾವತಿಸಿಕೊಂಡು ಬಿಡುಗಡೆ ಮಾಡಬೇಕು, ಅವುಗಳ ವಿಷಯವನ್ನು ನ್ಯಾಯಾಲಯದವರೆಗೆ ಒಯ್ಯುವ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್ ಮಂಗಳವಾರ ಹೇಳಿದೆ.
ಲಾಕ್ಡೌನ್ ನಿಯಮ ಉಲ್ಲಂಘನೆ ಆರೋಪದಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸೇರಿ ರಾಜ್ಯಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ವಾಹನಗಳನ್ನು ಸೀಜ್ ಮಾಡಲಾಗಿದೆ. ಈ ಎಲ್ಲ ವಾಹನಗಳ ಬಿಡುಗಡೆಗಾಗಿ ಮಾಲೀಕರು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ತೆರಳಿದರೆ ಜನಜಂಗುಳಿ ಏರ್ಪಡುವ ಸಾಧ್ಯತೆ ಇದೆ. ಜತೆಗೆ, ಅಷ್ಟೊಂದು ವಾಹನಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶದ ಕೊರತೆಯಾಗುತ್ತದೆ. ಆದ್ದರಿಂದ, ದಂಡ ವಿಧಿಸಿ ವಾಹನಗಳನ್ನು ಬಿಡುಗಡೆ ಮಾಡಲು ಪೊಲೀಸರಿಗೆ ಅವಕಾಶ ನೀಡಬೇಕು ಎಂದು ಸರ್ಕಾರದ ಪರ ವಕೀಲರು ಕೋರಿದರು.
ಇದನ್ನೂ ಓದಿ: ಕದಿಯುವಾಗಲೇ ಸಿಕ್ಕಿಬಿದ್ದ ಎಳನೀರು ಕಳ್ಳ; ಮಾರಾಟಗಾರರೇ ಕಾದು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ರು..
ಅದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ನಿಗದಿತ ದಂಡ ಪಾವತಿಸಿಕೊಂಡು ಬಿಡುಗಡೆ ಮಾಡಲು ಅನುಮತಿ ನೀಡಿ ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿತು. ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ ವಾಹನಗಳನ್ನು ದಂಡ ವಿಧಿಸಿ ಬಿಡುಗಡೆ ಮಾಡಲು 2020ರ ಏ.30ರಂದು ಬೆಂಗಳೂರು ಪೊಲೀಸರಿಗೆ ಅನುಮತಿ ನೀಡಲಾಗಿತ್ತು. ಆ ಆದೇಶವನ್ನು ರಾಜ್ಯಾದ್ಯಂತ ಅನ್ವಯವಾಗುವಂತೆ ವಿಸ್ತರಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು.
‘ನಮ್ಮನೆಯವರೇ ಎಎಸ್ಐ, ಫೋನ್ ಮಾಡ್ಲಾ?’ ಎಂದು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಮಹಿಳೆ!
ಜಾರಕಿಹೊಳಿ ಬ್ಲ್ಯಾಕ್ಮೇಲ್ ಆರೋಪಿಗಳಿಗೆ ಸಿಕ್ತು ನಿರೀಕ್ಷಣಾ ಜಾಮೀನು; ನರೇಶ್, ಶ್ರವಣ್ ಸದ್ಯ ನಿರಾಳ