ಬೈಲಹೊಂಗಲ: ವೀರವನಿತೆಯರ ಬದುಕು ನಾವು ಮಾದರಿಯಾಗಿಟ್ಟುಕೊಳ್ಳಬೇಕು. ಇಂತಹ ವೀರ ಮಹಿಳೆಯರ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಬೆಳವಡಿ ಮಲ್ಲಮ್ಮ ಉತ್ಸವ ಉದ್ಘಾಟಿಸಿ ಮಾತನಾಡಿ, ಮೊದಲ ಮಹಿಳಾ ಸೈನ್ಯ ಕಟ್ಟಿದ ಬೆಳವಡಿ ಮಲ್ಲಮ್ಮ, ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಹೋರಾಟದ ಬದುಕನ್ನು ಇಂದಿನ ಮಹಿಳೆಯರು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.
ಛತ್ರಪತಿ ಶಿವಾಜಿ ಮಹಾರಾಜರ ದೊಡ್ಡ ಸೈನ್ಯದ ಜತೆಗೆ ಬೆಳವಡಿ ಮಲ್ಲಮ್ಮ ಸೆಣಸಾಡಿರುವುದು ಅಸಾಮಾನ್ಯ ಸಾಧನೆ. ಕನ್ನಡ ನೆಲದ ವೀರ ಪರಂಪರೆಯ ಮಹಿಳೆ ಮಲ್ಲಮ್ಮ. ಬೆಳವಡಿ ಮಲ್ಲಮ್ಮ ದಿಟ್ಟ ವ್ಯಕ್ತಿತ್ವವನ್ನು ಅನುಸರಿಸಿದರೆ ಸಾಧನೆ ಸಾಧ್ಯವಾಗಲಿದೆ. ಹೆಣ್ಣು ಎಂಬ ಭೇದ ತೋರದೆ ಮಲ್ಲಮ್ಮಳ ತಂದೆ-ತಾಯಿಗಳು ನೀಡಿದ ಪ್ರೋತ್ಸಾಹವು ಆಕೆಯಲ್ಲಿ ಅತ್ಯುತ್ತಮ ಸಂಸ್ಕಾರ ಮತ್ತು ಧೈರ್ಯಶಾಲಿ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಹಕಾರಿಯಾಯಿತು ಎಂದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಹೂಲಿಯ ಹಿರೇಮಠ ಬೆಳವಡಿ ಸಂಸ್ಥಾನದ ರಾಜಗುರು ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಈರಣ್ಣ ಕರೀಕಟ್ಟಿ, ಅನಿಲ ಮೇಕಲಮರಡಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ನೀಲವ್ವ, ಮಾಜಿ ಶಾಸಕರಾದ ವಿ.ಐ. ಪಾಟೀಲ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಇತರರು ಉಪಸ್ಥಿತರಿದ್ದರು.
ರಾಣಿ ಮಲ್ಲಮ್ಮ ಪ್ರಶಸ್ತಿ ಪ್ರದಾನ
ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರಿಗೆ ‘ರಾಣಿ ಮಲ್ಲಮ್ಮ’ ಪ್ರಶಸ್ತಿಯನ್ನು ಸಚಿವೆ ಶಶಿಕಲಾ ಜೊಲ್ಲೆ ಪ್ರದಾನ ಮಾಡಿದರು. ಬೆಳವಡಿಯ ಈಶಪ್ರಭು ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಮ.ಮ. ಕಾಡೇಶನವರ ಅವರಿಗೆ ‘ರಾಜ ಈಶಪ್ರಭು’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು, ಬೆಳವಡಿ ಮಲ್ಲಮ್ಮನ ಹೋರಾಟವನ್ನು ಸ್ಮರಿಸಿದರು.