ಭರಮಸಾಗರ: ಭರಮಸಾಗರದಲ್ಲಿ ಭಾನುವಾರ ಆರ್ಯವೈಶ್ಯ ಸಮಾಜದವರು ಶ್ರದ್ಧಾ ಭಕ್ತಿಯಿಂದ ವಾಸವಿ ಜಯಂತ್ಯುತ್ಸವ ಆಚರಿಸಿದರು.
ಜಯಂತ್ಯುತ್ಸವದ ಅಂಗವಾಗಿ ವಾಸವಿ ಅಮ್ಮನವರಿಗೆ ವಿಶೇಷ ಪೂಜೆ ಆಯೋಜಿಸಲಾಗಿತ್ತು. ವಾಸವಿ ಸಮುದಾಯದ ಮುಖಂಡರು, ಯುವಕರು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಮುಖ್ಯ ಅರ್ಚಕ ಶಶಿಧರ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ವಾಸವಿ ಅಮ್ಮನವರಿಗೆ ಸುಪ್ರಭಾತ ಸೇವೆ, ಪಂಚಾಮೃತ, ಅಲಂಕಾರ ಮಹಾಮಂಗಳಾರತಿ ನಡೆಯಿತು.
ಪಟ್ಟಣದ ಆಸ್ಪತ್ರೆರಸ್ತೆ, ಶಿವಕುಮಾರ ಸ್ವಾಮಿ ರಸ್ತೆ, ಹಳೇ ರಾಷ್ಟ್ರೀಯ ಹೆದ್ದಾರಿ, ಪ್ರವಾಸಿ ಮಂದಿರದ ರಸ್ತೆ, ವಿನಾಯಕ ದೇಗುಲದ ರಸ್ತೆ, ಬಿಚ್ಚುಗತ್ತಿ ಭರಮಣ್ಣ ನಾಯಕ ವೃತ್ತ, ದುರ್ಗಾಂಬಿಕಾ ದೇವಸ್ಥಾನ ರಸ್ತೆ, ದೊಡ್ಡಪೇಟೆ ಮೂಲಕ ವಾಸವಿ ಮಂದಿರದ ವರೆಗೆ ಅಲಂಕೃತ ತೆರೆದ ವಾಹನದಲ್ಲಿ ವಾಸವಿ ಮೆರವಣಿಗೆ ಮಾಡಲಾಯಿತು.
ವಾಸವಿ ಯುವಕ ಸಂಘ ಹಾಗೂ ಮಹಿಳಾ ಮಂಡಳಿಯಿಂದ ಭಜನೆ ಮತ್ತು ನೃತ್ಯ ನಡೆಯಿತು. ದೇವಸ್ಥಾನದಲ್ಲಿ ಮಹಿಳೆಯರಿಂದ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ, ಸಂಕೀರ್ತನೆ ನಡೆಯಿತು. ಜಯಂತಿ ಹಿನ್ನಲೆಯಲ್ಲಿ ವೈಶ್ಯ ಸಮುದಾಯದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ಆಗಿದ್ದವು.
ಆರ್ಯವೈಶ್ಯ ಸಂಘದ ಅಧ್ಯಕ್ಷ ರಾಮಕೃಷ್ಣ ಶೆಟ್ರು, ಉಪಾಧ್ಯಕ್ಷ ಕೆ.ಜಿ.ಮಾಲತೇಶ ಕುಮಾರ್, ಕಾರ್ಯದರ್ಶಿ ಬಿ.ಎಲ್. ಶ್ರೀನಿವಾಸ್, ಯುವಜನ ಸಂಘದ ಅಧ್ಯಕ್ಷ ಬಿ.ಎನ್.ಮಂಜುನಾಥ್ಇತರರಿದ್ದರು.