ನೋಯ್ಡಾ: ವಂದೇ ಭಾರತ್ ಯೋಜನೆಯಡಿ ವಿದೇಶಗಳಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಉತ್ತರ ಪ್ರದೇಶ ಮೂಲದ ಪ್ರಯಾಣಿಕರು ನೋಯ್ಡಾ ಹಾಗೂ ಘಾಜಿಯಾಬಾದ್ಗೆ ತಲುಪಲು ಅನುವಾಗುವಂತೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಯುಪಿಎಸ್ಆರ್ಟಿಸಿ) ಟ್ಯಾಕ್ಸಿಗಳನ್ನು ವ್ಯವಸ್ಥೆ ಮಾಡಿದೆ. ಆದರೆ, ಅವುಗಳ ಸೌಲಭ್ಯವನ್ನು ಬಳಸುವ ಪ್ರಯಾಣಿಕರು ಶುಲ್ಕ ಪಾವತಿಸುವಷ್ಟರಲ್ಲೇ ಬಸವಳಿದುಬಿಡುತ್ತಾರೆ!
ಏಕೆಂದರೆ, ದೆಹಲಿ ವಿಮಾನ ನಿಲ್ದಾಣದಿಂದ ನೋಯ್ಡಾ ಮತ್ತು ಘಾಜಿಯಾಬಾದ್ ಅಂದಾಜು 250 ಕಿ.ಮೀ. ದೂರದಲ್ಲಿವೆ. ಇಲ್ಲಿಗೆ ಯುಪಿಎಸ್ಆರ್ಟಿಸಿಯ ಟ್ಯಾಕ್ಸಿಯಲ್ಲಿ ತೆರಳಬೇಕೆಂದರೆ ಪ್ರಯಾಣಿಕರು 10 ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ.
10 ಸಾವಿರ ರೂ. ಸೆಡಾನ್ ಟ್ಯಾಕ್ಸಿಯ ಶುಲ್ಕವಾದರೆ, ಎಸ್ಯುವಿಯಲ್ಲಿ ಹೋಗಲು ಬಯಸುವವರು 12 ಸಾವಿರ ರೂ. ಪಾವತಿಸಬೇಕಾಗುತ್ತದೆ. ಇದು 250 ಕಿ.ಮೀ.ವರೆಗಿನ ಪ್ರಯಾಣದ ದರವಾಗಿದ್ದು, ಹೆಚ್ಚುವರಿ ಪ್ರಯಾಣಕ್ಕೆ ಕ್ರಮವಾಗಿ ಕಿ.ಮೀಗೆ 40 ಮತ್ತು 50 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ನಿಯಮಿತ ರೈಲು ಸಂಚಾರ ಜೂನ್ 30ವರೆಗೂ ಆರಂಭವಾಗಲ್ಲ
ನಮಗೆ ಅಷ್ಟೊಂದು ಶಕ್ತಿಯಿಲ್ಲ. ಯುಪಿಎಸ್ಆರ್ಟಿಸಿ ವ್ಯವಸ್ಥೆ ಮಾಡಿರುವ ಬಸ್ಗಳಲ್ಲಿ ಪ್ರಯಾಣಿಸುತ್ತೇವೆ ಎಂದರೆ ಹವಾನಿಯಂತ್ರಿತವಲ್ಲದ ಬಸ್ನ ಪ್ರಯಾಣಕ್ಕೆ ತಲಾ 1 ಸಾವಿರ ರೂ. ಹಾಗೂ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ಬಸ್ನ ಪ್ರಯಾಣಕ್ಕೆ ತಲಾ 1,320 ರೂ. ಪಾವತಿಸಬೇಕಾಗುತ್ತದೆ. ಈ ಶುಲ್ಕಗಳು 100 ಕಿ.ಮೀ. ಅಂತರಕ್ಕೆ ಮಾತ್ರವೇ ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ದೂರ ಪ್ರಯಾಣಿಸಬೇಕು ಎಂದರೆ, 101ರಿಂದ 200 ಕಿ.ಮೀ.ವರೆಗಿನ ಪ್ರಯಾಣಕ್ಕೆ ಇದರ ಎರಡು ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ವಂದೇ ಭಾರತ್ ಯೋಜನೆಯಲ್ಲಿ ವಿದೇಶಗಳಿಂದ ಸ್ವದೇಶಕ್ಕೆ ಕರೆತರಲಾಗುವ ಪ್ರಯಾಣಿಕರ ಅನುಕೂಲಕ್ಕಾಗಿ ಯುಪಿಎಸ್ಆರ್ಟಿಸಿ ವತಿಯಿಂದ ಟ್ಯಾಕ್ಸಿ ಹಾಗೂ ಬಸ್ಗಳನ್ನು ವ್ಯವಸ್ಥೆಗೊಳಿಸುವಂತೆ ಸೂಚಿಸಿ ನಿಗಮದ ಎಂಡಿ ರಾಜಶೇಖರ್ ನಿಗಮದ ಪ್ರಾದೇಶಿಕ ವ್ಯವಸ್ಥಾಪಕರೆಲ್ಲರಿಗೂ ಮೇ 9ರಂದು ಪತ್ರ ಬರೆದಿದ್ದರು. ಅದರಂತೆ ಬಸ್ ಹಾಗೂ ಟ್ಯಾಕ್ಸಿಗಳನ್ನು ವ್ಯವಸ್ಥೆಗೊಳಿಸಲಾಗಿದೆ.