ಬೆಂಗಳೂರು ‘ತಾರಕಾಸುರ’ ಮತ್ತು ‘ಕಾಸಿದ್ರೆ ಕೈಲಾಸ’ ಎಂಬ ಚಿತ್ರಗಳಲ್ಲಿ ಹೀರೋ ಆಗಿದ್ದ ವೈಭವ್, ಇದೀಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈಗವರು ರವಿ ಎಂಬ ಹೆಸರಿನಲ್ಲಿ ‘ಅಪ್ಪು ಅಭಿಮಾನಿ’ ಎಂಬ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರದ ಮುಹೂರ್ತವಾಗಿದೆ. ಅಷ್ಟೇ ಅಲ್ಲ, ಚಿತ್ರದ ಮೊದಲ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಇದನ್ನೂ ಓದಿ: ‘ಲವ್ 360’ ಪ್ರವೀಣ್ ಈಗ ‘ದೇಸಾಯಿ’; ಬಾಗಲಕೋಟೆಯಲ್ಲಿ ಚಿತ್ರ ಪ್ರಾರಂಭ
‘ಅಪ್ಪು ಅಭಿಮಾನಿ’ ಎಂಬ ಹೆಸರೇ ಹೇಳುವಂತೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬನ ಕಥೆ ಇದು. ಆ ಅಭಿಮಾನಿಯಾಗಿ ರವಿ ನಟಿಸುತ್ತಿದ್ದಾರೆ. ಆ ಅಭಿಮಾನಿಗೆ ತನ್ನ ಮೆಚ್ಚಿನ ನಟನನ್ನು ಭೇಟಿಯಾಗುವ ಆಸೆ. ಆತ ತನ್ನ ಆಸೆ ಈಡೇರಿಸಿಕೊಳ್ಳುತ್ತಾನಾ? ಎಂಬುದು ಚಿತ್ರದ ಕಥೆ. ಚಿತ್ರಕ್ಕೆ ‘ಫಾರ್ ಎವರ್’ ಎಂಬ ಅಡಿಬರಹವೂ ಇದೆ.
ಈ ಚಿತ್ರದ ಕುರಿತು ಮಾತನಾಡುವ ರವಿ, ‘ನನ್ನ ಮೂಲ ಹೆಸರು ರವಿ. ಚಿತ್ರರಂಗಕ್ಕೆ ಬಂದಾಗ ವೈಭವ್ ಎಂದು ಹೆಸರು ಬದಲಿಸಿಕೊಂಡಿದ್ದೆ. ಈಗ ಮೂಲ ಹೆಸರೇ ಚಂದ ಅಂತನ್ನಿಸಿ, ‘ಅಪ್ಪು ಅಭಿಮಾನಿ’ ಚಿತ್ರದ ಮೂಲಕ ಮೊದಲ ಹೆಸರಿಗೇ ಮರಳಿದ್ದೇನೆ’ ಎಂದು ಹೇಳುತ್ತಾರೆ.
ಇದು ಮಂಗಳೂರಿನಲ್ಲಿ ನಡೆಯುವ ಕಥೆಯಂತೆ. ಹಾಗಾಗಿ, ಭಾಷೆ ಮತ್ತು ಬಾಡಿ ಲಾಂಗ್ವೇಜ್ ಬದಲಿಸಿಕೊಳ್ಳುವ ಸವಾಲು ರವಿ ಎದುರು ಇದೆ. ನಾಲ್ಕೈದು ತಿಂಗಳಲ್ಲಿ ಚಿತ್ರೀಕರಣ ಮುಗಿಸಿ, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
ಇದನ್ನೂ ಓದಿ: ಜ್ಯೂನಿಯರ್ ಎನ್ಟಿಆರ್ಗೆ ವಿಲನ್ ಆದ ಚೋಟೇ ನವಾಬ್!
‘ಅಪ್ಪು ಅಭಿಮಾನಿ’ ಚಿತ್ರವನ್ನು ಬಾಬು ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಶೇಖ್ ಮುನೀರ್ ಬಾಷ, ಬಾಬು ರೆಡ್ಡಿ ಮುಂತಾದವರು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ ಸಂಯೋಜಿಸಿದರೆ, ದೀಪಕ್ ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ನಾಯಕಿ ಸೇರಿದಂತೆ ಮಿಕ್ಕ ಕಲಾವಿದರ ಘೋಷಣೆ ಇನ್ನಷ್ಟೇ ಆಗಬೇಕಿದೆ.