ಕೊಪ್ಪ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 69,439 ಜಾನುವಾರುಗಳಿದ್ದು, 9 ಹೋಬಳಿ ಕೇಂದ್ರಗಳಲ್ಲೂ ಕಾಲುಬಾಯಿ ಮತ್ತು ಚರ್ಮಗಂಟು ರೋಗಗಳಿಗೆ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ರೇಬಿಸ್ ತಡೆಗಟ್ಟಲು 18,000 ನಾಯಿಗಳಿಗೆ ಲಸಿಕೆ ಹಾಕಲಾಗಿದೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಗ್ರಾಪಂನಿಂದ ಸಂತಾನಶಕ್ತಿಹರಣ ಚಿಕಿತ್ಸೆ ಮಾಡಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಶುಸಂಗೋಪನಾ ಇಲಾಖೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾನುವಾರು ಮತ್ತು ಶ್ವಾನಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ ಪಶು ವೈದ್ಯಕೀಯ ಸಂಚಾರಿ ಆಂಬುಲೆನ್ಸ್ ಸೇವೆ ಚಾಲ್ತಿಯಲ್ಲಿದೆ. ಕೊಟ್ಟಿಗೆ, ಶೆಡ್ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ. ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ, ಹಸುಗಳಿಗೆ ರಬ್ಬರ್ ಮ್ಯಾಟ್ಗಳು ಇಲಾಖೆಯಿಂದ ರಿಯಾಯಿತಿಯಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ತಳಿಯ ಜಾನುವಾರಗಳು, ವಿವಿಧ ತಳಿಯ 100ಕ್ಕೂ ಹೆಚ್ಚು ಶ್ವಾನಗಳು ಇದ್ದವು. ಪ್ರದರ್ಶನದಲ್ಲಿ ವಿಜೇತ ಜಾನುವಾರು ಮತ್ತು ಶ್ವಾನಗಳಿಗೆ ಪಾರಿತೋಷಕ ನೀಡಲಾಯಿತು.
ಪಶುವೈದ್ಯ ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಪ್ರದೀಪ್, ರೋಟರಿ ಗವರ್ನರ್ ಜೆ.ಎಂ.ಶ್ರೀಹರ್ಷ, ಅಧ್ಯಕ್ಷ ಡಾ. ಪ್ರವೀಣ್, ರೋಟರಿ ಕೊಪ್ಪ ಮಲ್ನಾಡ್ ಅಧ್ಯಕ್ಷ ಕೇಶವಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷೆ ಮಧುಲಿಕಾ ಪ್ರಜ್ವಲ್, ಲಯನ್ಸ್ ಕ್ಲಬ್ನ ಬಾಳೆಮನೆ ನಟರಾಜ್, ಪ್ರಸನ್ನಕುಮಾರ್, ಎಚ್.ಎಸ್.ಇನೇಶ್, ಕೆಡಿಪಿ ಸದಸ್ಯ ಚಿಂತನ್ ಬೆಳಗೊಳ, ಡಿಎಸ್ಎಸ್ ಮುಖಂಡ ರಾಜಾಶಂಕರ್ ಇತರರಿದ್ದರು.