ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಪಾತ್ರ ಅಗಾಧವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಿ ಸಂಪನ್ಮೂಲ ಪ್ರಜೆಯನ್ನಾಗಿ ರೂಪಿಸಬೇಕು ಎಂದು ವಿಜಯಪುರ ಡಯಟ್ ಉಪ ಪ್ರಾಚಾರ್ಯ ಎನ್.ಬಿ. ಹೊಸೂರ ಹೇಳಿದರು.
ಉತ್ನಾಳ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಮಹಾಲಕ್ಷ್ಮಿದೇವಿ ಪಬ್ಲಿಕ್ ಸ್ಕೂಲ್ ಹಾಗೂ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯದ ವಾರ್ಷಿಕೋತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮತ್ತು ನೂತನ ಶಾಲಾ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿಂದಗಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶರಣಪ್ಪ ವಾರದ ಮಾತನಾಡಿ, ಶ್ರೀಮಠವು ಶ್ರೀ ಶಿವಪುತ್ರಯ್ಯ ಸ್ವಾಮೀಜಿಯವರ ಆಶೀರ್ವಾದದಿಂದ ಸದಾಕಾಲ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೊಡಗು, ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಶ್ರೀಮಠ ನೆರವು ನೀಡುವ ಮೂಲಕ ಮಾನವೀಯತೆಯ ನೆಲೆಗಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದೆ ಎಂದರು.
ಶ್ರೀಮಠದ ಶಿವಪುತ್ರಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರಿಭಂಟನಾಳ ಶ್ರೀ ಗುರು ಗಂಗಾಧರೇಶ್ವರ ಹಿರೇಮಠದ ಶಿವಕುಮಾರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಂ. ಸಜ್ಜನ, ಗುರುಬಸಯ್ಯ ಕಟಗೇರಿಮಠ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ವೈ. ಬೆಳ್ಳುಬ್ಬಿ, ಕೃಷಿ ಸಹವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ, ಗಣ್ಯರಾದ ಶಾಂತು ಆತನೂರ, ಶಿವಾನಂದ ಮಂಗಾನವರ, ರವಿ ನಾಗೂರ, ಪ್ರಕಾಶ ಕೋರಿ ಇತರರಿದ್ದರು. ಡಾ. ಮಾಂತೇಶ ಹಿರೇಮಠ ಸ್ವಾಗತಿಸಿದರು, ಕೌಸರ್ ಬಂದಗಿ, ಸುವರ್ಣ ಹಿರೇಮಠ ನಿರೂಪಿಸಿದರು.