ನವದೆಹಲಿ: ವಾಸ್ತವ ಗಡಿರೇಖೆ ಬಳಿ ಚೀನಿಯರು ಹೆಚ್ಚಿನ ಉದ್ಧಟತನ ತೋರಿ, ಪರಿಸ್ಥಿತಿ ಕೈಮೀರುವಂತಿದ್ದರೆ ಯಾವುದೇ ಮುಲಾಜಿಲ್ಲದೆ ಶಸ್ತ್ರಾಸ್ತ್ರಗಳನ್ನು ಬಳಸುವಂತೆ ಸರ್ಕಾರ ಭಾರತೀಯ ಸೇನಾಪಡೆ ಯೋಧರಿಗೆ ಸೂಚನೆ ರವಾನಿಸಿದೆ.
ಗಲ್ವಾನ್ ನದಿಯ ಬಳಿ ಉಂಟಾದ ಘರ್ಷಣೆಯ ನಂತರದಲ್ಲಿ ಚೀನಾದೊಂದಿಗಿನ ಜಟಾಪಟಿಯ ನಿಯಮಗಳನ್ನು ಬದಲಿಸಿರುವ ಕೇಂದ್ರ ಸರ್ಕಾರ ಪರಿಸ್ಥಿತಿ ತೀರಾ ಕೈಮೀರುತ್ತಿದೆ ಎಂದಾದರೆ, ಶಸ್ತ್ರಾಸ್ತ್ರಗಳ ಬಳಕೆಗೆ ಹಿಂದೆಮುಂದೆ ಆಲೋಚಿಸದಂತೆ ಹೇಳಿದೆ.
ಎಲ್ಎಸಿ ಬಳಿ ಪರಿಸ್ಥಿತಿಯನ್ನು ಆಧರಿಸಿ ದಾಳಿ ಅಥವಾ ಪ್ರತಿದಾಳಿ ಕೈಗೊಳ್ಳಲು ಭಾರತೀಯ ಸೇನಾಪಡೆಗೆ ಮುಕ್ತ ಅವಕಾಶ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಬೆನ್ನಲ್ಲೇ ಇಂಥ ಒಂದು ನಿರ್ಧಾರ ಹೊರಬಿದ್ದಿದೆ.
ಇದನ್ನೂ ಓದಿ: ಟೆಂಟ್ ತೆಗೆಯಿರಿ ಎಂದು ಹೇಳಲು ಹೋದ ಭಾರತೀಯ ಯೋಧರ ಮೇಲೆ ಚೀನಿಯರ ದಾಳಿ
ಲಡಾಖ್ನ ಪೂರ್ವ ಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಕೋರ್ ಕಮಾಂಡರ್ ಮಟ್ಟದ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ ವಿಷಯವೂ ಸೇರಿ ಇನ್ನೂ ಹಲವು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ.
1996 ಮತ್ತು 2005ರಲ್ಲಿನ ಒಪ್ಪಂದದ ಪ್ರಕಾರ ಎಲ್ಎಸಿಯ 2 ಕಿ.ಮೀ. ವ್ಯಾಪ್ತಿಯಲ್ಲಿ ಭಾರತ ಮತ್ತು ಚೀನಾ ಯೋಧರು ಯಾವುದೇ ಸ್ಫೋಟಕಗಳನ್ನಾಗಲಿ ಅಥವಾ ಶಸ್ತ್ರಾಸ್ತ್ರಗಳನ್ನಾಗಲಿ ಬಳಸುವುದಿಲ್ಲ. ಆದರೆ ಅಂದಾಜು 45 ವರ್ಷಗಳ ಬಳಿಕ ಗಲ್ವಾನ್ ನದಿಯ ಬಳಿ ರಕ್ತಸಿಕ್ತ ಘರ್ಷಣೆ ಉಂಟಾದ ಹಿನ್ನೆಲೆಯಲ್ಲಿ ಭಾರತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ.