More

    ಯುಪಿಎಸ್​ಸಿ ಕಷ್ಟವಲ್ಲ ಈಸಿ: ಇಲ್ಲಿವೆ ರಾಜ್ಯದ ಸಾಧಕರು ಕೊಟ್ಟಿರುವ ಟಿಪ್ಸ್

    ಸಾಕಷ್ಟು ಜನರಿಗೆ ಜೀವನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಐಎಸ್-ಐಪಿಎಸ್ ಆಗುವ ಕನಸು ಇರುತ್ತದೆ. ಆದರೆ, ಆ ಕನಸು ನನಸು ಮಾಡಿಕೊಳ್ಳುವವರು ಕೆಲವರು ಮಾತ್ರ. ಯುಪಿಎಸ್​ಸಿ ಪರೀಕ್ಷೆ ತೆಗೆದುಕೊಳ್ಳುವುದು ಹೇಗೆ?, ಓದಬೇಕಾದ ಪುಸ್ತಕಗಳು ಯಾವುವು?, ಆಯ್ಕೆ ಮಾಡಿಕೊಳ್ಳಬೇಕಾದ ವಿಷಯ ಯಾವುದು?, ಸಂದರ್ಶನ ಎದುರಿಸುವುದು ಹೇಗೆ? ಎಂಬುದರ ಜತೆಗೆ ಪಾಸ್ ಆಗಲು ಬೇಕಾದ ಟಿಪ್ಸ್​ಗಳನ್ನು ಯುಪಿಎಸ್​ಸಿ ಸಾಧಕರಾದ ಎಚ್.ಆರ್. ಕೌಶಿಕ್, ಕೆ.ಟಿ. ಮೇಘನಾ, ಎನ್. ವಿವೇಕ್ ರೆಡ್ಡಿ, ಎಚ್.ಜಿ. ದರ್ಶನ್ ಕುಮಾರ್ ಅವರು ವಿಜಯವಾಣಿ ಆಯೋಜಿಸಿದ್ದ ಫೋನ್ ಇನ್​ನಲ್ಲಿ ಕೊಟ್ಟಿದ್ದಾರೆ. ಮುಂದೆ ಯುಪಿಎಸ್​ಸಿ ಪರೀಕ್ಷೆ ಬರೆಯುವ ಕನಸು ಕಾಣುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇವರ ಮಾತುಗಳು ಸ್ಪೂರ್ತಿದಾಯಕ.

    ವಿಜಯವಾಣಿ ಪ್ರೇರಣೆ ಆಶಯ

    ಪ್ರತಿ ವರ್ಷ ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯದಿಂದ ಅರ್ಹತೆ ಪಡೆದವರನ್ನು ಕಚೇರಿಗೆ ಕರೆಸಿ, ಸಮಾಜಕ್ಕೆ, ಮಕ್ಕಳಿಗೆ, ಆಕಾಂಕ್ಷಿಗಳಿಗೆ ಪ್ರೇರೇಪಣೆ ನೀಡುವ ಸಂಪ್ರದಾಯವನ್ನು ‘ವಿಜಯವಾಣಿ’ ಪಾಲಿಸಿಕೊಂಡು ಬಂದಿದೆ. ಈ ಬಾರಿ ದೇಶಾದ್ಯಂತ 6 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆ ಬರೆದಿದ್ದು, ಈ ಪೈಕಿ ಅಂತಿಮವಾಗಿ ಆಯ್ಕೆಯಾಗಿದ್ದು, 829 ಮಂದಿ ಮಾತ್ರ. ಅವರ ಪೈಕಿ ಕರ್ನಾಟಕದ ಸಾಧಕರು 40ಕ್ಕೂ ಹೆಚ್ಚು ಮಂದಿ. ಅವರ ಪೈಕಿ ನಾಲ್ವರು ತಮ್ಮ ಅನುಭವ ಹಂಚಿಕೊಂಡರು.

    ಜಾಲತಾಣ ಬಳಕೆಗೆ ಮಿತಿ ಸೂಕ್ತ

    ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸುವವರು ಸಾಮಾಜಿಕ ಜಾಲತಾಣ ಬಳಸದಿರುವುದೇ ಸೂಕ್ತ. ಒಂದು ವೇಳೆ ಬಳಕೆ ಮಾಡುವುದೇ ಆದರೆ ಅದಕ್ಕೆ ಮಿತಿ ನಿಗದಿ ಮಾಡಿಕೊಳ್ಳಬೇಕು. ಫೇಸ್​ಬುಕ್, ವಾಟ್ಸ್ ಆಪ್, ಇನ್​ಸ್ಟಾಗ್ರಾಮ್ಳಿಂದ ಉಪಯೋಗಕ್ಕಿಂತ ಸಮಯ ವ್ಯರ್ಥವಾಗುವುದೇ ಹೆಚ್ಚು. ವಾಟ್ಸ್​ಆಪ್ ಗ್ರೂಪ್ ಮಾಡಿಕೊಂಡು ಅಭ್ಯಾಸ ನಡೆಸುವುದು ಒಂದು ಮಟ್ಟಕ್ಕೆ ಒಳ್ಳೆಯದು. ಆದರೆ, ಅದರಲ್ಲೇ ಕಾಲ ಕಳೆಯುವುದು ಸರಿಯಲ್ಲ ಎಂದು ಯುಪಿಎಸ್​ಸಿ ಅಭ್ಯರ್ಥಿಗಳು ಸಲಹೆ ನೀಡಿದ್ದಾರೆ.

    ಗೊಂದಲ ಬೇಡ, ಗುರಿ ಸ್ಪಷ್ಟವಿರಲಿ

    ಯುಪಿಎಸ್​ಸಿ ಪರೀಕ್ಷೆ ತೆಗೆದುಕೊಳ್ಳಬೇಕೆಂಬ ಬಹುತೇಕ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುನಲ್ಲಿ ಮತ್ತು ಪದವಿಯಲ್ಲಿ ಯಾವ ವಿಷಯ ಆರಿಸಿಕೊಳ್ಳಬೇಕೆಂಬುದೇ ದೊಡ್ಡ ಗೊಂದಲ ಆಗಿರುತ್ತದೆ. ಅಂಥ ವಿದ್ಯಾರ್ಥಿಗಳು ಮೊದಲು ತಮ್ಮ ಗುರಿ ಸ್ಪಷ್ಟಪಡಿಸಿಕೊಳ್ಳಬೇಕು. ಯುಪಿಎಸ್​ಸಿ ಹೊರತಾಗಿ ಬೇರೇನೂ ಬೇಡ ಎಂದರೆ, ಕಲಾ ನಿಕಾಯ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ, ಯುಪಿಎಸ್​ಸಿನಲ್ಲಿ ಮತ್ತೆ ಅದೇ ವಿಷಯಗಳನ್ನೇ ಓದಬೇಕಾಗಿರುತ್ತದೆ. ಯುಪಿಎಸ್​ಸಿ ಪಾಸ್ ಆಗಿಲ್ಲವೆಂದರೆ ನನಗೊಂದು ಕೆಲಸ ಬೇಕು ಎಂಬುವರು ಸಾಮಾನ್ಯವಾಗಿ ಇಂಜಿನಿಯರಿಂಗ್, ಎಂಬಿಬಿಎಸ್ ಈ ರೀತಿ ವೃತ್ತಿಪರ ಕೋರ್ಸ್ ಆರಿಸಿಕೊಳ್ಳುವುದು ಉತ್ತಮ ಎಂದು ಅಭ್ಯರ್ಥಿಗಳು ತಿಳಿಸಿದರು.

    ಎಲ್ಲರೂ ಹನುಮಂತರೇ. ಉತ್ತೇಜಿಸಲು ರಾಮ ಬರಬೇಕಷ್ಟೆ. ಹುರಿದುಂಬಿಸುವ ಕೆಲಸವಾದರೆ ಖಂಡಿತ ಕನ್ನಡದಲ್ಲೇ ಪರೀಕ್ಷೆ ಎದುರಿಸಿ ಪಾಸ್ ಆಗಬಹುದು.

    | ದರ್ಶನ್

    ದೆಹಲಿಗೆ ಹೋಗಬೇಕಾಗಿಲ್ಲ

    ಯುಪಿಎಸ್​ಸಿ ಪರೀಕ್ಷೆಗೆ ತೆಗೆದುಕೊಳ್ಳುವವರು ಎಂದರೆ ಅವರೆಲ್ಲ ಹೈದರಾಬಾದ್ ಅಥವಾ ದೆಹಲಿ ಯಲ್ಲಿ ತರಬೇತಿ ಪಡೆಯಬೇಕೆಂಬ ಕಾಲ ಒಂದಿತ್ತು. ಇಂದು ಬೆಂಗಳೂರಿನಲ್ಲೇ ಉತ್ತಮ ತರಬೇತಿ ನೀಡುವ ಕೇಂದ್ರಗಳಿವೆ. 24 ಗಂಟೆಗಳ ಗ್ರಂಥಾಲಯಗಳಿವೆ. ಇಂಟರ್​ನೆಟ್ ಇರುವುದರಿಂದ ಅದರ ಮೂಲಕ ವೆಬ್​ಸೈಟ್​ನಲ್ಲಿ ಸಿಗುವ ಮಾಹಿತಿ ಯಿಂದಲೂ ಅಭ್ಯಾಸ ನಡೆಸಬಹುದಾಗಿದೆ ಎನ್ನುತ್ತಾರೆ ಈ ಸಾಧಕರು.

    ಯಶಸ್ಸಿನ ನವ ಸೂತ್ರ

    1. ಪಿಯು ಹಂತದಲ್ಲೇ ಗುರಿ ನಿಶ್ಚಯಿಸಿ, ಪದವಿ ಬಳಿಕ ಪರೀಕ್ಷೆ ತೆಗೆದುಕೊಂಡು ತಯಾರಾಗಿ.

    2. ಕೋಚಿಂಗ್​ಗೆ ಹೋಗಲೇಬೇಕೆಂದಿಲ್ಲ, ಹೋದರೆ ಮಾರ್ಗದರ್ಶನ ಸಿಗುತ್ತದೆ. ಈಗ ಡಿಜಿಟಲ್ ರೂಪದಲ್ಲಿ ಎಲ್ಲವೂ ಲಭ್ಯ.

    3. ಪ್ರಸಕ್ತ ವಿದ್ಯಮಾನ ತಿಳಿಯಲು ಕನ್ನಡ, ಇಂಗ್ಲಿಷ್ ಪತ್ರಿಕೆ ಓದು ಮುಖ್ಯ. ರಾಜ್ಯಸಭಾ ಟಿವಿ, ಯೂಟ್ಯೂಬ್ ಉಪಯುಕ್ತ. ಸಾಮಾಜಿಕ ಜಾಲತಾಣದಿಂದ ದೂರ ಇರುವುದು ಉತ್ತಮ.

    4. ಅನಗತ್ಯ ಓದು ಬೇಕಿಲ್ಲ. ಯಾವ ವಿಚಾರದಲ್ಲಿ ಹಿಂದಿದ್ದೇವೆಂದು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಿ

    ನಾನು ನಿತ್ಯ ವಿಜಯವಾಣಿ, ವಿದ್ಯಾರ್ಥಿ ಮಿತ್ರ ಓದುತ್ತೇನೆ. ಇದರಿಂದ ಹೆಚ್ಚಿನ ಅನುಕೂಲವಾಗಿದೆ. ಆಕಾಂಕ್ಷಿಗಳು ಇದನ್ನು ಅನುಸರಿಸಿದರೆ ಉಪಯೋಗವಾಗಬಹುದು.
    | ಎಚ್.ಆರ್.ಕೌಶಿಕ್

    ಯುಪಿಎಸ್​ಸಿಗೆ ಉಪಯುಕ್ತ ಪುಸ್ತಕಗಳು

    • ಎನ್​ಸಿಇಆರ್​ಟಿ ಪಠ್ಯಪುಸ್ತಕ.
    • ರಾಜ್ಯಶಾಸ್ತ್ರ- ಲಕ್ಷಿ್ಮಕಾಂತ್.
    • ಇತಿಹಾಸ- ತಮಿಳುನಾಡು ಪಠ್ಯಪುಸ್ತಕ 11, 12ನೇ ತರಗತಿ.
    • ಸ್ಪೆಕ್ಟ್ರಂ ಜಿಯೋಗ್ರಫಿ-6ರಿಂದ 8ನೇ ತರಗತಿ ಪಠ್ಯಪುಸ್ತಕ, ಮುರ್ನಾಲ್ ವಿಡಿಯೋಗಳು.
    • ಪರಿಸರ ಅಧ್ಯಯನ – ಶಂಕರ್ ಐಎಎಸ್ ಪುಸ್ತಕ.
    • ಪ್ರಚಲಿತ ವಿದ್ಯಮಾನಗಳು- ಕನ್ನಡ ಮತ್ತು ಆಂಗ್ಲ ಭಾಷಾ ಪತ್ರಿಕೆ, ರಾಜ್ಯ ಸಭಾ ಟಿವಿ.
    • ವೆಬ್​ಸೈಟ್ – ಇನ್​ಸೈಟ್ಸ್, ಮುರ್ನಾಲ್, ರಾಜ್ಯಸಭಾ ಟಿವಿ.

    ಎಚ್.ಆರ್. ಕೌಶಿಕ್

    ಯುಪಿಎಸ್​ಸಿ ಕಷ್ಟವಲ್ಲ ಈಸಿ: ಇಲ್ಲಿವೆ ರಾಜ್ಯದ ಸಾಧಕರು ಕೊಟ್ಟಿರುವ ಟಿಪ್ಸ್ಇವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದರಾಗಿದ್ದು, ಭಾರತೀಯ ಕಂದಾಯ ಸೇವೆ (ಐಆರ್​ಎಸ್)ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಬಿಐಟಿನಲ್ಲಿ ಇಂಜಿನಿಯರಿಂಗ್ ಮುಗಿಸಿ 3 ವರ್ಷ ಸಿಸ್ಕೋ ಕಂಪನಿಯಲ್ಲಿ ಕೆಲಸ ಮಾಡಿದ ಬಳಿಕ ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಈ ಹಿಂದೆ ಐಎಎಸ್-ಐಪಿಎಸ್ ಕರ್ನಾಟಕ ಕೇಡರ್​ಗೆ ಸಿಗಬೇಕಾಗಿದ್ದ ಅವಕಾಶ ಶೂನ್ಯಾಂಕದಲ್ಲಿ ಕೈ ತಪ್ಪಿತ್ತು. ಆದರೆ, ನಾನು ಪ್ರಯತ್ನ ಬಿಡಲಿಲ್ಲ. ಕೆಲಸಕ್ಕೆ ಕ್ಯಾಬ್​ನಲ್ಲಿ ಹೋಗುವಾಗಲೆಲ್ಲ ಅಭ್ಯಾಸ ಮಾಡುತ್ತಿದ್ದೆ. ಈ ಬಾರಿ ಪಾಸ್ ಆಗಿದಕ್ಕೆ ಬಹಳ ಖುಷಿಯಾಗಿದೆ. ನನಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಬೇಕೆಂಬ ಹಂಬಲ ಇದೆ ಎನ್ನುತ್ತಾರೆ ಕೌಶಿಕ್.

    ಹಾರ್ಡ್ ಆಂಡ್ ಸ್ಮಾರ್ಟ್

    ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್ ಆಗಬೇಕಾದರೆ ಕಠಿಣ ಪರಿಶ್ರಮ ಪಡಲೇಬೇಕು. ಜತೆಗೆ ಸ್ಮಾರ್ಟ್​ವರ್ಕ್ ಕೂಡ ಅಷ್ಟೇ ಮುಖ್ಯ. ಬಹುತೇಕ ಅಭ್ಯರ್ಥಿಗಳಿಗೆ ಯಾವೆಲ್ಲ ವಿಷಯ ಓದಬೇಕು ಎಂಬುದಕ್ಕಿಂತ ಯಾವ ವಿಷಯ ಓದಬಾರದು ಎಂಬ ಅರಿವು ಇರಬೇಕು. ಸಿಕ್ಕ ಸಮಯವನ್ನು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಬಳಸಿಕೊಳ್ಳಬೇಕು. ಪತ್ರಿಕೆಗಳನ್ನು ಮತ್ತು ಎನ್​ಸಿಇಆರ್​ಟಿ ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ಓದಬೇಕು. ಇದರ ಜತೆಗೆ ಪತ್ರಿಕೆಗಳನ್ನು ಓದುವಾಗ ವಿಷಯ ಏನು? ಇದರಿಂದ ಪ್ರಯೋಜನವೇನು? ಅನುಷ್ಠಾನ ಹೇಗೆ? ಎಂಬ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಓದಬೇಕು ಎಂದು ಕೌಶಿಕ್ ಹೇಳಿದರು.

    ಕೆ.ಟಿ. ಮೇಘನಾ

    ಯುಪಿಎಸ್​ಸಿ ಕಷ್ಟವಲ್ಲ ಈಸಿ: ಇಲ್ಲಿವೆ ರಾಜ್ಯದ ಸಾಧಕರು ಕೊಟ್ಟಿರುವ ಟಿಪ್ಸ್ಇವರು ಮೈಸೂರು ಜಿಲ್ಲೆ ಕುಡುಕೂರಿನವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 10ನೇ ತರಗತಿಯಲ್ಲಿ ದೃಷ್ಟಿಹೀನತೆಗೆ ಒಳಗಾದರು. ಸುರಾನಾ ಕಾಲೇಜಿನಲ್ಲಿ ಬಿ.ಎ. ಮುಗಿಸಿ ನಂತರ 2015ನೇ ಸಾಲಿನಲ್ಲಿ ಕೆಎಎಸ್ ಬರೆದು ಮೊದಲ ಪ್ರಯತ್ನದಲ್ಲೇ ಪಾಸ್ ಆಗಿ, ಖಜಾನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಯುಪಿಎಸ್​ಸಿಯನ್ನು 2ನೇ ಪ್ರಯತ್ನದಲ್ಲೇ ಪಾಸ್ ಮಾಡಿದ್ದಾರೆ. ದೃಷ್ಟಿಹೀನತೆಗೆ ಒಳಗಾದಾಗ ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಈ ವೇಳೆ ನನ್ನನ್ನು ನಾನು ಸರಿಯಾಗಿ ಅರ್ಥಮಾಡಿಕೊಳ್ಳಲು ಆರಂಭಿಸಿದೆ. ಐಎಎಸ್, ಎಂಬಿಎ, ನಿರೂಪಣೆ ಮತ್ತು ಶಿಕ್ಷಕಿ.. ಈ ನಾಲ್ಕರಲ್ಲಿ ಒಂದನ್ನು ಆರಿಸಿಕೊಳ್ಳಬೇಕು ಎಂದುಕೊಂಡಿದ್ದೆ. ಐಎಎಸ್ ಮೊದಲ ಆಯ್ಕೆ ಇದ್ದರಿಂದ ಪ್ರಯತ್ನ ಆರಂಭಿಸಿದೆ. ಮನೆಯವರ ಸಹಾಯ ಹಾಗೂ ಇತರರ ಪ್ರೋತ್ಸಾಹದಿಂದ ಪಾಸ್ ಆಗಿದ್ದೇನೆ ಎನ್ನುತ್ತಾರೆ ಮೇಘನಾ.

    ನಮ್ಮ ಗುರಿ ಬಿಡಬಾರದು

    ಯುಪಿಎಸ್​ಸಿ ಪಾಸ್ ಆಗಬೇಕೆಂಬ ಗುರಿ ನಿಮ್ಮಲ್ಲಿರಲಿ. ಫೇಲ್ ಆಗಲು ಕುಟುಂಬದ ಆರ್ಥಿಕ ವ್ಯವಸ್ಥೆ, ದೈಹಿಕ ಸಮಸ್ಯೆ ಅಡ್ಡಿ ಅಲ್ಲ ಎಂಬುದನ್ನು ಚೆನ್ನಾಗಿ ಅರಿತಿರಿ. ಒಮ್ಮೆ ಪಾಸ್ ಆಗಿಲ್ಲ ಎಂಬ ಕಾರಣಕ್ಕೆ ಪ್ರಯತ್ನ ಬಿಡಬಾರದು, ಮತ್ತೆ ಮತ್ತೆ ಪ್ರಯತ್ನಿಸುತ್ತಿರಿ. ಪ್ರತಿ ಪ್ರಯತ್ನದಲ್ಲೂ ನೀವು ಸುಧಾರಿಸಿಕೊಳ್ಳಬೇಕು. ಜೀವನದಲ್ಲಿ ಸಣ್ಣ ವಿಷಯ ಕಷ್ಟ ಎಂದುಕೊಂಡರೆ ಎಲ್ಲವೂ ಕಷ್ಟವೇ ಆಗಿರುತ್ತದೆ. ಇದನ್ನು ಮೆಟ್ಟಿ ನಿಲ್ಲುವ ಶಕ್ತಿ ರೂಢಿಸಿಕೊಳ್ಳಿ ಎಂದರು ಮೇಘನಾ.

    ಎನ್. ವಿವೇಕ್ ರೆಡ್ಡಿ

    ಯುಪಿಎಸ್​ಸಿ ಕಷ್ಟವಲ್ಲ ಈಸಿ: ಇಲ್ಲಿವೆ ರಾಜ್ಯದ ಸಾಧಕರು ಕೊಟ್ಟಿರುವ ಟಿಪ್ಸ್ಇವರು ಚಿಕ್ಕಬಳ್ಳಾಪುರದವರಾಗಿದ್ದು, ಶಿವಮೊಗ್ಗದ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಬೆಂಗಳೂರಿನ ನಿಮ್ಹಾನ್ಸ್​ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಶಾಲಾ ಮುಖ್ಯೋಪಧ್ಯಾಯರು. ನಾನು ಐಎಎಸ್ ಅಧಿಕಾರಿ ಆಗಬೇಕೆಂಬುದು ನನ್ನ ತಂದೆಯವರ ಆಸೆ ಆಗಿತ್ತು. ಪದವಿ ಇದ್ದಾಗಲೇ ಸ್ವಯಂ ಕಲಿಕೆ ಆರಂಭಿಸಿದೆ. ಆನಂತರ ಕೆಲವು ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ, ಟೆಸ್ಟ್ ಸೀರಿಸ್, ಅಣಕು ಸಂದರ್ಶನದಲ್ಲಿ ಭಾಗವಹಿಸಿದೆ. ಸತತ ಮೂರನೇ ಪ್ರಯತ್ನದಲ್ಲಿ ಪಾಸ್ ಆಗಿದ್ದೇನೆ. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರಬೇಕೆಂಬುದು ನನ್ನ ಆಸೆ ಎನ್ನುತ್ತಾರೆ ವಿವೇಕ್.

    ಕೋಚಿಂಗ್ ಬೇಕಾ?

    ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಅರಿವಿಲ್ಲದವರಿಗೆ ಕೋಚಿಂಗ್ ಅಗತ್ಯ. ಏಕೆಂದರೆ, ಇಲ್ಲಿ ಪರೀಕ್ಷೆ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಜತೆಗೆ ಯಾವ ರೀತಿಯಲ್ಲಿ ಓದಬೇಕು, ಏನನ್ನು ಓದಬೇಕು ಎಂಬುದನ್ನು ತಿಳಿಸಿಕೊಡುತ್ತಾರೆ. ಇದಾದ ನಂತರ ನೀವು ಸ್ನೇಹಿತರೆಲ್ಲರೂ ಸೇರಿ ಒಗ್ಗೂಡಿ ಓದಿಕೊಳ್ಳಬಹುದು. ಯುಟ್ಯೂಬ್, ವೆಬ್​ಸೈಟ್​ಗಳಲ್ಲಿ ಸಿಗುವ ಮಾಹಿತಿ ಜತೆಗೆ ಅಭ್ಯಸಿಸುವುದು ಉತ್ತಮ ಎಂದು ವಿವೇಕ್ ತಿಳಿಸಿದರು.

    ದರ್ಶನ್ ಕುಮಾರ್

    ಯುಪಿಎಸ್​ಸಿ ಕಷ್ಟವಲ್ಲ ಈಸಿ: ಇಲ್ಲಿವೆ ರಾಜ್ಯದ ಸಾಧಕರು ಕೊಟ್ಟಿರುವ ಟಿಪ್ಸ್ಇವರ ಊರು ಹಾಸನ ಜಿಲ್ಲೆಯ ಹರಳಕಟ್ಟೆ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ಬೆಂಗಳೂರಿನ ಇಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಬಳಿಕ 6 ವರ್ಷ ಇನ್ಪೋಸಿಸ್​ನಲ್ಲಿ ಕೆಲಸ ಮಾಡಿ ಅಮೆರಿಕಕ್ಕೆ ಹೋಗಿ ಅಲ್ಲಿ ಸ್ವಲ್ಪ ವರ್ಷ ಕೆಲಸದಲ್ಲಿದ್ದರು. ನಂತರ ರಾಜ್ಯಕ್ಕೆ ಮರಳಿ 2016ರಿಂದ ಯುಪಿಎಸ್​ಸಿಗೆ ಅಭ್ಯಾಸ ನಡೆಸಿದರು. ಈ ಮಧ್ಯೆ ಹೈನುಗಾರಿಕೆ ಆರಂಭಿಸಿ ಯಶ್ವಸಿ ಕೃಷಿಕರಾಗಿ ಕನ್ನಡದ ಮಾಧ್ಯಮದಲ್ಲೇ ಪರೀಕ್ಷೆ ಬರೆದು 4ನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪಾಸ್ ಮಾಡಿದ್ದಾರೆ. ಕೃಷಿಯನ್ನು ಲಾಭದಾಯಕ ಉದ್ದಿಮೆಯಾಗಿ ರೂಪಿಸಿ, ಯುವಕರನ್ನು ಕೃಷಿ ಕಡೆಗೆ ಕರೆದೊಯ್ಯುವುದು ನನ್ನ ಉದ್ದೇಶ. ಹೀಗಾಗಿ ಮುಂದೆ ಕೃಷಿಯಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದೇನೆ ಎನ್ನುತ್ತಾರೆ ದರ್ಶನ್.

    ಜ್ಞಾನ ದರ್ಶನ

    ಯುಪಿಎಸ್​ಸಿ ಚೆನ್ನಾಗಿ ಆಂಗ್ಲ ಭಾಷೆ ಬಲ್ಲ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರ ಎಂಬುದು ಸುಳ್ಳು. ನಾನು ಕನ್ನಡದಲ್ಲೇ ಬರೆದು ಪಾಸ್ ಆಗಿದ್ದೇನೆ. ಜತೆಗೆ ಕನ್ನಡಿಗರು ಹೆಚ್ಚು ಯುಪಿಎಸ್​ಸಿ ಪಾಸ್ ಆಗಬೇಕೆಂಬುದೇ ನನ್ನ ಆಸೆ. ಕನ್ನಡದಲ್ಲಿ ಪರೀಕ್ಷೆ ಬರೆಯುವವರಿಗೆಂದೇ ‘ಜ್ಞಾನ ದರ್ಶನ’ www.jnanadarshana.com ಎಂಬ ಹೆಸರಿನಲ್ಲಿ ಯೂ-ಟ್ಯೂಬ್ ಚಾನೆಲ್, ಟೆಲಿಗ್ರಾಂ ವೇದಿಕೆ ಕಲ್ಪಿಸಿದ್ದೇವೆೆ ಎನ್ನುತ್ತಾರೆ ದರ್ಶನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts