More

    ಹೃದಯವಾಹಿನಿ ಸಹಭಾಗಿತ್ವದಲ್ಲಿ ಆಯೋಜನೆ, ರಿಯಲ್ ಸ್ಟಾರ್ ಉಪೇಂದ್ರ ಉದ್ಘಾಟನೆ


    ವಿಜಯವಾಣಿ ಸುದ್ದಿಜಾಲ
    ಮಸ್ಕತ್: ಒಮನ್ ಕನ್ನಡ ಸಂಘ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಭಾಗಿತ್ವದಲ್ಲಿ ಮಸ್ಕತ್​ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ರಿಯಲ್ ಸ್ಟಾರ್ ಉಪೇಂದ್ರ ಉದ್ಘಾಟಿಸಿದರು.

    ಕನ್ನಡಿಗರಾದ ಕೆ.ಪಿ. ಮಂಜುನಾಥ ಸಾಗರ್ ಅವರ ನೇತೃತ್ವದಲ್ಲಿ ಕಳೆದ 16 ವರ್ಷಗಳಿಂದ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಹಮ್ಮಿಕೊಳ್ಳುತ್ತಿರುವ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ 16ನೇ ಸಮ್ಮೇಳನವನ್ನು ಖ್ಯಾತ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ವೆಂಕಟೇಶ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

    67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಶ್ವ ಸಂಸ್ಕೃತಿಗೆ ಕನ್ನಡದ ಆರತಿ ಎಂಬ ವಿನೂತನ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಒಮಾನ್ ಮತ್ತಿತರ ರಾಷ್ಟ್ರಗಳಲ್ಲಿ ನೆಲೆಸಿರುವ ಸಾವಿರಾರು ಕನ್ನಡಿಗರು ಪಾಲ್ಗೊಂಡಿದ್ದರು.

    ಕಾರ್ಯಕ್ರಮ ಉದ್ಘಾಟಿಸಿ ಕೊನೆಯಲ್ಲಿ ಅಪಾರ ಪ್ರೇಕ್ಷಕರೊಂದಿಗೆ ಸಂವಾದಕ್ಕಿಳಿದ ರಿಯಲ್ ಸ್ಟಾರ್ ಉಪೇಂದ್ರ, ಎಲ್ಲರೂ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಬಯಸುತ್ತಾರೆ. ಅಂತೆಯೇ ನಾನು ರಾಜಕೀಯವನ್ನು ಪ್ರಜಾಕೀಯವಾಗಿ ಬದಲಿಸಲು ಪ್ರಪಥಮವಾಗಿ ಕ್ಯಾಶ್ ಲೆಸ್ ಪಾರ್ಟಿ ಹುಟ್ಟುಹಾಕಿದ್ದೇನೆ ಎಂದರು.

    ಸಮ್ಮೇಳನಾಧ್ಯಕ್ಷ ಪ್ರೊ.ಮಲ್ಲೇಪುರ ವೆಂಕಟೇಶ್ ಅವರು ಮಾತನಾಡಿ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವನ್ನು ಒಳಗೊಂಡಿದ್ದು ಕರ್ನಾಟಕ. ಕನ್ನಡಿಗರು ಜಗತ್ತಿನ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ಕನ್ನಡ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಅಂತಹ ಕಾರ್ಯಕ್ಕೆ ಮಂಜುನಾಥ ಸಾಗರ್ ರಂತಹ ಸಂಘಟಕರಿಂದ ಹೆಚ್ಚಿನ ಶಕ್ತಿ ಬಂದಿದೆ ಎಂದರು.

    ಸಮ್ಮೇಳನದ ಪ್ರಮುಖ ಆಯೋಜಕ ಕೆ.ಪಿ.ಮಂಜುನಾಥ ಸಾಗರ್ ಅವರು ಮಾತನಾಡಿ, ಕನ್ನಡ ನಾಡಿನ ಎಲ್ಲ ವರ್ಗದ ಕಲಾವಿದರಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅವಕಾಶ ಸಿಗಬೇಕೆಂಬ ಮೂಲ ಉದ್ದೇಶದಿಂದ ಆರಂಭವಾದ ಸಮ್ಮೇಳನ ಇಂದು ಹೆಮ್ಮರವಾಗಿ ಮುಂದುವರೆದಿದೆ ಎಂದರು.

    ಕೆ.ಪಿ.ಮಂಜುನಾಥ ಸಾಗರ್ ಅವರ ನೇತೃತ್ವದಲ್ಲಿ ಕರ್ನಾಟಕದಿಂದ ಆಗಮಿಸಿದ್ದ ಅನೇಕ ಕಲಾವಿದರು, ಗಾಯಕರು ವಿವಿಧ ಪ್ರದರ್ಶನ ನೀಡಿದರು. ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಅನಿವಾಸಿ ಕನ್ನಡಿಗರ ಕೋಶದ ಮಾಜಿ ಅಧ್ಯಕ್ಷೆ ಆರತಿ ಕೃಷ್ಣ, ಮಸ್ಕತ್ ಕನ್ನಡ ಸಂಘದ ಅಧ್ಯಕ್ಷ ಪ್ರಸಾದ್, ಸ್ಥಳೀಯ ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts