ರವಿಚಂದ್ರನ್ ಮತ್ತು ಉಪೇಂದ್ರ ಅಭಿನಯದಲ್ಲಿ ಕಳೆದ ವರ್ಷ ಪ್ರಾರಂಭವಾಗಿದ್ದ ‘ರವಿ-ಚಂದ್ರ’ದ ಹೆಸರು ಬದಲಾಗಿದ್ದು ನೆನಪಿರಬಹುದು. ಕಳೆದ ತಿಂಗಳಷ್ಟೇ ಈ ಚಿತ್ರಕ್ಕೆ ‘ವೇದ-ವ್ಯಾಸ’ ಎಂಬ ಹೆಸರನ್ನು ಇಡಲಾಗಿದೆ ಎಂಬ ಸುದ್ದಿಯಾಗಿತ್ತು. ಖುದ್ದು ಉಪೇಂದ್ರ ಅವರು ‘ವಿಜಯವಾಣಿ’ ಜತೆಗೆ ಮಾತನಾಡುತ್ತಾ, ಚಿತ್ರದ ಹೆಸರು ಬದಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ‘ರವಿ-ಚಂದ್ರ’ ಚಿತ್ರದ ಹೆಸರು ಬದಲಾಯ್ತಾ?
ಈಗ ಆ ಹೆಸರು ಮತ್ತೊಮ್ಮೆ ಬದಲಾಗಿದೆ. ಯಾವ ಕಾರಣಕ್ಕೆ ‘ವೇದ-ವ್ಯಾಸ’ ಎಂಬ ಹೆಸರನ್ನು ಬದಲಾಯಿಸಲಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ, ಇದೀಗ ಚಿತ್ರಕ್ಕೆ ‘ತ್ರಿಶೂಲಂ’ ಎಂಬ ಹೆಸರು ಫೈನಲ್ ಆಗಿದೆ. ಅಷ್ಟೇ ಅಲ್ಲ, ಈ ಕುರಿತಾಗಿ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಪೋಸ್ಟರ್ ಬಿಡುಗಡೆಯಾಗಿರುವುದಷ್ಟೇ ಅಲ್ಲ, ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು, ನಾಳೆ (ಸೆಪ್ಟೆಂಬರ್ 18) ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಟೀಸರ್ ಬಿಡುಗಡೆಯಾಲಿದೆ. ನಾಳೆ ಸಂಜೆ 6.30ಕ್ಕೆ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಈ ಟೀಸರ್ ಬಿಡುಗಡೆ ಮಾಡಲಿದ್ದಾರೆ.
ಅಂದಹಾಗೆ, ‘ತ್ರಿಶೂಲಂ’ ಚಿತ್ರವು ತೆಲುಗಿನ ‘ಬಲುಪು’ ಚಿತ್ರದ ರೀಮೇಕ್ ಆಗಿದ್ದು, ಮೂಲ ಚಿತ್ರದಲ್ಲಿದ್ದ ತಂದೆ-ಮಗನ ಪಾತ್ರಗಳನ್ನು, ಇಲ್ಲಿ ಅಣ್ಣ-ತಮ್ಮನಾಗಿ ಬದಲಾಯಿಸಿಕೊಳ್ಳಲಾಗಿದೆ. ಆ ಚಿತ್ರದಲ್ಲಿ ಪ್ರಕಾಶ್ ರೈ ಮತ್ತು ರವಿತೇಜ, ಅಪ್ಪ-ಮಗನಾಗಿ ಕಾಣಿಸಿಕೊಂಡಿದ್ದರು. ಇಲ್ಲಿ ರವಿಚಂದ್ರನ್ ಮತ್ತು ಉಪೇಂದ್ರ, ಅಣ್ಣ-ತಮ್ಮನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಇದನ್ನೂ ಓದಿ: ಇಷ್ಟೆಲ್ಲ ಹಾರಾಡುವ ಬದಲು, ನೀನೇ ಬಾಲಿವುಡ್ ಡ್ರಗ್ಗಿಗಳ ಪಟ್ಟಿ ಕೊಡು; ಕಂಗನಾಗೆ ಊರ್ಮಿಳಾ ಚಾಲೆಂಜ್
ಈ ಚಿತ್ರವನ್ನು ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದು, ಇದು ಅವರ ನಿರ್ದೇಶನದ 47ನೇ ಚಿತ್ರ ಎಂಬುದು ವಿಶೇಷ. ಶಾನ್ವಿ ಶ್ರೀವಾತ್ಸವ್ ಮತ್ತು ನಿಮಿಕಾ ರತ್ನಾಕರ್ ಇಬ್ಬರೂ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.