ಶಿವಮೊಗ್ಗ: 2024ರ ಒಲಿಂಪಿಕ್ ನಲ್ಲಿ ಭಾರತ ಟಾಪ್ 10ರೊಳಗೆ ಬರುವ ಗುರಿ ಇದೆ ಎಂದು ಯುವಜನ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ ಕಿರೆನ್ ರಿಜಿಜು ಹೇಳಿದರು.
ಸಹ್ಯಾದ್ರಿ ಕಾಲೇಜಿನಲ್ಲಿ ಶನಿವಾರ ಒಳಾಂಗಣ ಕ್ರೀಡಾಂಗಣ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಪ್ಯಾರಿಸ್ ಒಲಿಂಪಿಕ್ ನಲ್ಲಿ ಹೆಚ್ಚಿನ ಪದಕ ತರುವ ಹಂಬಲವಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಚರ್ಚೆ ಮಾಡಲಾಗಿದೆ ಎಂದರು.
ವಿಶ್ವದಲ್ಲೇ ಭಾರತವನ್ನು ಕ್ರೀಡಾ ಶಕ್ತಿಯನ್ನಾಗಿ ಮಾಡಲಾಗುವುದು. ದೀರ್ಘಾವಧಿಯಲ್ಲಿ ಹೆಚ್ಚು ಪದಕ ಪಡೆಯುವಂತೆ ಮಾಡಲಾಗುತ್ತದೆ. ಕ್ರೀಡಾ ಚಟುವಟಿಕೆಗೆ ಬೇಕಾದ ಯೋಜನೆಗಳನ್ನು ಸ್ಮಾರ್ಟ್ ಸಿಟಿ, ಫಿಟ್ ಇಂಡಿಯಾ, ಖೇಲೊ ಇಂಡಿಯಾ ಯೋಜನೆಗಳಡಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಒಲಿಂಪಿಕ್ ನಲ್ಲಿ ಪದಕ ಪಡೆಯುವ ಪಟ್ಟಿಯಲ್ಲಿ ಕರ್ನಾಟಕ ಕೂಡ ಅಗ್ರ ಸ್ಥಾನದಲ್ಲಿರುವಂತೆ ನೋಡಿಕೊಳ್ಳಲಾಗುವುದು. ರಾಷ್ಟ್ರದಲ್ಲೇ ಶಿವಮೊಗ್ಗ ಕ್ರೀಡಾ ಕೇಂದ್ರವಾಗಿ ಮಾರ್ಪಡಲು ಬೇಕಾದ ಸೌಲಭ್ಯ ನೀಡಲಾಗುವುದು. ಇಲ್ಲಿನ ಒಳಾಂಗಣ ಕ್ರೀಡಾಂಗಣಕ್ಕೆ ಬೇಕಿರುವ ಹೆಚ್ಚುವರಿ ಅನುದಾನಕ್ಕೆ ತಾಂತ್ರಿಕ ಸಮಿತಿ ಕಳುಹಿಸಿ ವರದಿ ಪಡೆದು ನೆರವು ನೀಡಲಾಗುವುದು ಎಂದರು.
೨೦೨೮ಕ್ಕೆ ಭಾರತದಲ್ಲಿ ಒಲಿಂಪಿಕ್ ನಡೆಸಲು ಸಿದ್ಧರಿದ್ದು ಈ ಸಂಬಂಧ ಒಲಿಂಪಿಕ್ ಅಸೋಸಿಯೇಷನ್ ಗೆ ಮನವಿ ಸಲ್ಲಿಸಲಾಗುವುದು ಎಂದರು.