ವಿಜಯಪುರ: ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವಂತೆ ಮಾಡಿ. ಹೊಸ ಕರ್ನಾಟಕದ ವಿಶ್ವಾಸ, ಹೊಸ ಕರ್ನಾಟಕದ ಕನಸನ್ನು ಕೇವಲ ಮೋದಿಯಿಂದ ಮಾತ್ರ ನನಸು ಮಾಡಲು ಸಾಧ್ಯ. ಕಾಂಗ್ರೆಸ್ ಸರ್ಕಾರ ರಿವರ್ಸ್ ಗೇರ್ನಲ್ಲಿ ಚಲಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ತರಬೇಡಿ
ಪ್ರಚಾರದ ಭಾಗವಾಗಿ ವಿಜಯಪುರದಲ್ಲಿ ಮಾತನಾಡುತ್ತಾ, ನಾವು ಮೀಸಲಾತಿಯಲ್ಲಿ ಬಹಳ ಬದಲಾವಣೆ ಮಾಡಿದ್ದೇವೆ. ಧರ್ಮದ ಆಧಾರದಲ್ಲಿ ಸಂವಿಧಾನ ಯಾವುದೇ ಮೀಸಲಾತಿ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ಗಾಗಿ ಮುಸ್ಲಿಂ ರಿಸರ್ವೇಷನ್ ಮಾಡಿತ್ತು. ಬಿಜೆಪಿ ಸರ್ಕಾರ ಅವರ 4 ಪರ್ಸೆಂಟ್ ಮೀಸಲಾತಿ ತೆಗೆದು ಲಿಂಗಾಯತ, ತಳವಾರ ಸೇರಿದಂತೆ ಇತರೆ ಸಮುದಾಯಗಳಿಗೆ ಅನುಕೂಲ ಕಲ್ಪಿಸಿದೆ. ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಯಾರೂ ಭಯಪಡಬೇಡಿ, ಕಾಂಗ್ರೆಸ್ ಅಧಿಕಾರಕ್ಕೆ ತರಬೇಡಿ ಎಂದು ಹೇಳಿದರು.
ಇದನ್ನೂ ಓದಿ: ಬಿಎಸ್ವೈ ಭೇಟಿ ಮಾಡಿದ ಬಿ.ಎಲ್ ಸಂತೋಷ್; ಸಿದ್ದರಾಮಯ್ಯ ಸೋಲಿಸಲು ಕಾರ್ಯತಂತ್ರ!
ಪಿಎಫ್ಐನಿಂದ ಕರ್ನಾಟಕ್ಕೆ ಕಂಟಕ ಇದೆ
ಅಮಿತ್ ಷಾ ಮಾತನಾಡುತ್ತಾ, ಕರ್ನಾಟಕದಲ್ಲಿ ಪಾಪ್ಯೂಲರ್ ಫ್ರಂಟ್ನವರು ಹಿಂಸಾಚಾರ ಮಾಡುತ್ತಿದ್ದರು. ಅವರನ್ನು ಬ್ಯಾನ್ ಮಾಡುವ ಮೂಲಕ ಅದನ್ನು ತಡೆದಿದ್ದೇವೆ. ಸಿದ್ದರಾಮಯ್ಯ ಪಿಎಫ್ಐ ಅವರನ್ನು ಬಿಟ್ಟಿದ್ದರು. ಕಾಂಗ್ರೆಸ್ ಬಂದ್ರೆ ಪಿಎಫ್ಐ ನಿಷೇಧ ಆದೇಶವನ್ನು ಹಿಂತೆಗೆಯುತ್ತಾರೆ. ಪಿಎಫ್ಐನಿಂದ ಕರ್ನಾಟಕ್ಕೆ ಕಂಟಕ ಇದೆ. ಯಾರೂ ಚಿಂತಿಸಬೇಕಾಗಿಲ್ಲ. ಪಿಎಫ್ಐ ಬ್ಯಾನ್ ನಿಷೇಧವನ್ನು ಹಿಂತೆಗೆಯಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಮನಮೋಹನ ಸಿಂಗ್ ಸರ್ಕಾರ ಇದ್ದಾಗ ಪಾಕಿಸ್ತಾನದವರು ಬಂದು ಯೋಧರ ಶವಗಳನ್ನು ಕೆಡವುತ್ತಿದ್ರು. ಉಗ್ರರನ್ನು ತಡೆಯಲು ಅವರು ಧೈರ್ಯ ಮಾಡಿರಲಿಲ್ಲ. ಮೋದಿ ಬಂದ ಮೇಲೆ ಅವರ ಮನೆಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಹೊಡೆದರು. ಇದಕ್ಕೆ ರಾಹುಲ್ ಗಾಂಧಿ ಸಾಕ್ಷಿ ಕೇಳುತ್ತಾರೆ ಎಂದು ಹೇಳುತ್ತಾ ಕಾಂಗ್ರೆಸ್ ವಿರುದ್ಧ ಅಮಿತ್ ಷಾ ಗುಡುಗಿದರು.
ಇದನ್ನೂ ಓದಿ: ನನ್ನ ಮೇಲೆ ಮಾಡಿರುವ ಭ್ರಷ್ಟಾಚಾರ ಆರೋಪವನ್ನು ಸಿದ್ದರಾಮಯ್ಯ ಸಾಬೀತು ಮಾಡಲಿ; ಸವಾಲೆಸೆದ ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ
ಕಾಂಗ್ರೆಸ್ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಬಿಜೆಪಿ ಬಂದ ಮೇಲೆ ಕಿತ್ತೂರು ಕರ್ನಾಟಕ ಮಾಡಿ ಅಭಿವೃದ್ಧಿ ಮಾಡಲಾಗಿದೆ. 2ಲಕ್ಷ 34ಸಾವಿರ ಕೋಟಿ ರೂ. ಖರ್ಚು ಮಾಡಿ ಅಭಿವೃದ್ಧಿ ಮಾಡಲಾಗಿದೆ. ಬಡವರಿಗೆ ನಾಲ್ಕು ಲಕ್ಷ ಮನೆ, ಬಡವರಿಗೆ ಉಚಿತ ಅಕ್ಕಿ, ಉಚಿತ ಗ್ಯಾಸ್, ವಿಮಾ ಕೊಡಲಾಗಿದೆ. ಕರ್ನಾಟಕದ ವಿಕಾಸವನ್ನು ಮೋದಿ ಮಾತ್ರ ಮಾಡಲು ಸಾಧ್ಯ. ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕು. ಕಾಂಗ್ರೆಸ್ ವರ್ಷಗಳಿಂದ ರಾಮ ಮಂದಿರ ಆಗುವುದನ್ನು ತಡೆದಿತ್ತು. ಮೋದಿ ಬಂದಮೇಲೆ ಭೂಮಿ ಪೂಜೆ ಮಾಡಿ, ಇದೀಗ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುವಂತೆ ಮಾಡಿ ಎಂದು ಅಮಿತ್ ಷಾ ಮತದಾರರಲ್ಲಿ ಕೇಳಿಕೊಂಡರು.