ಜೊಹಾನ್ಸ್ಬರ್ಗ್: ಸೆಂಚುರಿಯನ್ ಗೆಲುವಿನ ಹೊರತಾಗಿಯೂ 2ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ವಿನ್ನಿಂಗ್ ಕಾಂಬಿನೇಷನ್ನಲ್ಲಿ ಬದಲಾವಣೆ ಕಾಣುವ ಸಾಧ್ಯತೆಗಳಿವೆ. ವಾಂಡರರ್ಸ್ ಪಿಚ್ ಹೆಚ್ಚು ಹಸಿರಾಗಿದ್ದು, ಗಂಟೆಗೆ 135 ಕಿಮೀ ವೇಗದಲ್ಲಿ ುಲ್ಲರ್ ಲೆಂತ್ ಬೌಲಿಂಗ್ ಮಾಡುವ ಉಮೇಶ್ ಯಾದವ್ ಹೆಚ್ಚು ಉಪಯುಕ್ತರಾಗುವ ಲೆಕ್ಕಾಚಾರವನ್ನು ದ್ರಾವಿಡ್-ಕೊಹ್ಲಿ ಹಾಕಿಕೊಂಡಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್ ಬದಲಿಗೆ ಉಮೇಶ್ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಆಲ್ರೌಂಡರ್ ಕೋಟಾದಡಿಯಲ್ಲಿ ಶಾರ್ದೂಲ್ ಸೆಂಚುರಿಯನ್ ಟೆಸ್ಟ್ನಲ್ಲಿ ಅವಕಾಶ ಪಡೆದಿದ್ದರು. ಆದರೆ, ಬೌಲಿಂಗ್ನಲ್ಲಿ 2 ವಿಕೆಟ್ ಕಬಳಿಸಿದ್ದರೂ, ಬ್ಯಾಟಿಂಗ್ನಲ್ಲಿ ಅವರು ಹೆಚ್ಚು ಉಪಯೋಗಕ್ಕೆ ಬಂದಿರಲಿಲ್ಲ. ಕೇವಲ 4, 10 ರನ್ ಗಳಿಸಿದ್ದರು. ಹೀಗಾಗಿ ಜೊಹಾನ್ಸ್ಬರ್ಗ್ನಲ್ಲಿ ಉಮೇಶ್ ಯಾದವ್ರ ಸ್ವಿಂಗ್ ಎಸೆತಗಳಿಂದ ಹೆಚ್ಚಿನ ಲಾಭ ಪಡೆಯಲು ಭಾರತ ತಂಡ ಬಯಸಿದೆ.
ಅಶ್ವಿನ್ ಬದಲು ವಿಹಾರಿ?
ಸೆಂಚುರಿಯನ್ ಟೆಸ್ಟ್ನ ಕೊನೇ 2 ವಿಕೆಟ್ ಕಬಳಿಸಿದ್ದು ಹೊರತಾಗಿ ಸ್ಪಿನ್ನರ್ ಆರ್. ಅಶ್ವಿನ್ ಹೆಚ್ಚು ಯಶಸ್ಸು ಕಂಡಿರಲಿಲ್ಲ. ಇನ್ನು ಜೊಹಾನ್ಸ್ಬರ್ಗ್ ಪಿಚ್ ವೇಗಿಗಳ ಸ್ವರ್ಗ ಎನಿಸಿದ್ದು, ಭಾರತ 2018ರಲ್ಲಿ ಇಲ್ಲಿ ಸ್ಪಿನ್ನರ್ ಇಲ್ಲದೆ ಕಣಕ್ಕಿಳಿದಿತ್ತು. ಆಗ ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜತೆಗೆ ನಾಲ್ವರು ತಜ್ಞ ವೇಗಿಗಳು ಆಡಿದ್ದರು. ಇನ್ನು ಅಶ್ವಿನ್ 2013ರಲ್ಲಿ ಇಲ್ಲಿ ಆಡಿದ್ದರೂ, 42 ಓವರ್ ಬೌಲಿಂಗ್ ಮಾಡಿ ಒಂದೂ ವಿಕೆಟ್ ಕಬಳಿಸಿರಲಿಲ್ಲ. ಹೀಗಾಗಿ ಅಶ್ವಿನ್ ಆಡುವರೇ ಅಥವಾ ಹೆಚ್ಚುವರಿ ಬ್ಯಾಟರ್ ಆಗಿ ಹನುಮ ವಿಹಾರಿ 7ನೇ ಕ್ರಮಾಂಕದಲ್ಲಿ ಅವಕಾಶ ಪಡೆಯುವರೇ ಎಂಬ ಕುತೂಹಲವಿದೆ.
ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸದಂತೆ ವಿನಂತಿಸಿದ್ದೆವು, ಆಯ್ಕೆ ಸಮಿತಿ ಅಧ್ಯಕ್ಷರಿಂದ ಫ್ರೀ ಹಿಟ್!