ಬೆಂಗಳೂರು: ಮಂಗಳವಾರ (ಸೆ.06) ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದ ಸಚಿವ ಉಮೇಶ್ ಕತ್ತಿ ಅವರ ಅಂತಿಮ ಕ್ರಿಯೆ ಅವರ ಹುಟ್ಟೂರಾದ ಬೆಲ್ಲದಬಾಗೇವಾಡಿಯ ತೋಟದಲ್ಲಿ ಇಂದು (ಸೆ.07) ಸಂಜೆ ನಡೆಯಲಿದೆ.
ತಡರಾತ್ರಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಉಮೇಶ್ ಕತ್ತಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಕತ್ತಿ ಅವರನ್ನು ನೆನೆದು ಕಣ್ಣೀರಿಟ್ಟರು.
ಉತ್ತರ ಕರ್ನಾಟಕದ ಧ್ವನಿ ನಿಂತು ಹೋಗಿದೆ. ಧೀಮಂತ ನಾಯಕ, ಸಹಕಾರಿ ಧುರೀಣನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಕುಟುಂಬ ಮಾತ್ರವಲ್ಲ, ಒಬ್ಬ ಸಹೋದರನನ್ನು ಕಳೆದುಕೊಂಡ ನಷ್ಟ ನನಗೂ ಆಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲೆಂದು ಪ್ರಾರ್ಥಿಸುವೆ ಎಂದು ಬೊಮ್ಮಾಯಿ ಹೇಳಿದರು.
ಪಡಿತರ ವ್ಯವಸ್ಥೆಯಡಿ ರೈತರು ಬೆಳೆದ ರಾಗಿ, ಜೋಳ ವಿತರಣೆಯನ್ನು ಪಟ್ಟು ಹಿಡಿದು ಜಾರಿಗೆ ತರುವ ಮೂಲಕ ಸಾಮಾಜಿಕ, ಜನಪರ ಕಾಳಜಿಯನ್ನು ತೋರಿಸಿದರು. ನಮಗೆ ಕತ್ತಿಯವರ ಕುಟುಂಬದ ಜತೆಗೆ ನಾಲ್ಕು ದಶಕಗಳ ಸಂಬಂಧವಿದೆ. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ನನ್ನ ತಂದೆ ಎಸ್.ಆರ್.ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಬಿ.ಎಸ್.ಯಡಿಯೂರಪ್ಪ ಹೀಗೆ ಎಲ್ಲ ಹಿರಿಯ ನಾಯಕರೊಂದಿಗೆ ಕತ್ತಿ ಅನ್ಯೋನ್ಯವಾದ ಒಡನಾಟ ಹೊಂದಿದ್ದರು ಎಂದು ತಿಳಿಸಿದರು.
ಹಿಡಕಲ್ ಅಣೆಕಟ್ಟೆ ಬಳಿ ಆಲಮಟ್ಟಿ ಮಾದರಿ ಬೃಂದಾವನ ನಿರ್ಮಾಣ, ಹಿನ್ನೀರಿನ ದ್ವೀಪಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಒಪ್ಪಿಗೆ ನೀಡಿದಾಗ ಖುದ್ದು ಭೇಟಿಯಾಗಿ ಬಹು ದಿನದ ಕನಸು ನನಸು ಮಾಡಿದಿರಿ ಎಂದು ಸಂತಸ ಹಂಚಿಕೊಂಡಿದ್ದರು ಎಂದು ಬೊಮ್ಮಾಯಿ ಅವರು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಅಂತಿಮ ವಿಧಿವಿಧಾನದ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ಇಂದು ಬೆಳಗ್ಗೆ 7 ಗಂಟೆಗೆ ಕತ್ತಿ ಪಾರ್ಥಿವ ಶರೀರವನ್ನು ಬೆಳಗಾವಿಗೆ ಏರ್ ಲಿಫ್ಟ್ ಮಾಡಲಾಗುವುದು. ಸಂಕೇಶ್ವರದ ಹೀರಾ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗುವುದು. ನಂತರ ಬೆಲ್ಲದಬಾಗೇವಾಡಿಯ ಅವರ ನಿವಾಸದಲ್ಲಿ ಅಂತಿಮ ವಿಧಿವಿಧಾನ ಪೂರ್ಣಗೊಳಿಸಿ, ಸಂಜೆ 5 ಗಂಟೆಗೆ ಅವರ ಸ್ವಂತ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಹೇಳಿದರು.
ಮಂಗಳವಾರ ಅವರು ತಮ್ಮ ಮನೆಯಲ್ಲಿದ್ದಾಗ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದ್ದು, ಬಾತ್ರೂಮ್ನಲ್ಲಿ ಕುಸಿದುಬಿದ್ದಿದ್ದರು. ಊಟ ಮಾಡಿರಲಿಲ್ಲ. ಬಳಿಕ ತಕ್ಷಣ ಕುಟುಂಬಸ್ಥರು ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರು ಅವರ ಆರೋಗ್ಯ ಸ್ಥಿತಿಯ ಮೇಲೆ ತೀವ್ರ ಗಮನ ಇರಿಸಿ, ಚಿಕಿತ್ಸೆ ನೀಡುತ್ತಿದ್ದರು. ಅದಾಗ್ಯೂ ಚಿಕಿತ್ಸೆ ಫಲಿಸದೆ ಅವರು ಇಂದು ರಾತ್ರಿ 11 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.
‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್ಎ..’ ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..
ಕತ್ತಿ ತಂದೆ ಅಧಿವೇಶನ ನಡೆಯುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು; ಪುತ್ರನೂ ಹೃದಯಾಘಾತಕ್ಕೆ ಬಲಿ..