ಬೆಂಗಳೂರು: ಕೆಲವೇ ನಿಮಿಷಗಳ ಮೊದಲು ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಅವರು ಎರಡು ವಾರಗಳ ಹಿಂದೆ ವಿಜಯವಾಣಿ ಜತೆ ಮಾತನಾಡಿದ್ದರು. ಅಂದು ವಿಜಯವಾಣಿ ಪ್ರತಿನಿಧಿ ಜತೆ ಮಾತನಾಡಿದ್ದ ಅವರು, ‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್ಎ..’ ಎಂದಿದ್ದರು. ಕಾಕತಾಳೀಯ ಎಂಬಂತೆ ಅದು ನಿಜವಾಗಿದೆ.
ವಿಜಯವಾಣಿ ಜತೆ ಮೊನ್ನೆಮೊನ್ನೆಯಷ್ಟೇ ಎಂಬಂತೆ ಉಮೇಶ್ ಕತ್ತಿ ಅವರು ಮಾತನಾಡಿದ್ದ, ಕೆಲವು ವಿಷಯಗಳು ಇಲ್ಲಿವೆ..
ಆಗಸ್ಟ್ 23, ಮಧ್ಯಾಹ್ನ 1 ಗಂಟೆ @ವಿಧಾನಸೌಧ
ವಿಜಯವಾಣಿ: ಮುಂದಿನ ಚುನಾವಣೆಯಲ್ಲಿ ನೀವು ಕ್ಷೇತ್ರ ಬದಲಿಸ್ತೀರಾ? ಹಿರಿಯರು ಬೇರೆ ಕ್ಷೇತ್ರ ನೋಡಿಕೊಳ್ಳಿ ಎಂದು ಪಕ್ಷದ ಸೂಚನೆ ಇದೆಯಲ್ಲ!
ಉಮೇಶ್ ಕತ್ತಿ: ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್ಎ.. ಇನ್ನು 10 ವರ್ಷ ಯಾರೂ ನನ್ನ ಅಲ್ಲಾಡಿಸೋಕೆ ಆಗೋಲ್ಲ. ಯಾವನೂ ನನ್ನ ಸ್ಥಾನ ಕಿತ್ಕೊಳಕೆ ಆಗಲ್ಲ.
ವಿಜಯವಾಣಿ: ನೀವು ಪದೇಪದೆ ಸಿಎಂ ಆಗ್ತೇನೆ ಅಂತೀರಾ? ನಿಜಕ್ಕೂ ಅಷ್ಟೊಂದು ಆಸೆ ಇದೆಯಾ? ಮುಂದಿನ ಬಾರಿ ಪ್ರಯತ್ನ ಮಾಡ್ತಿರಾ?
ಉಮೇಶ್ ಕತ್ತಿ: ಬೇಡಪ್ಪಾ ಬೇಡ, ಆ ಸ್ಥಾನ 300 ಡಿಗ್ರಿ ಹೆಂಚಿನ ಮೇಲೆ ಕೂತಂತೆ. ಯಾರಿಗೆ ಬೇಕ್ರಿ? ಈಗ ಆರಾಮ್ ಇದ್ದೇನೆ. ಅಧಿಕಾರದಲ್ಲಿರಬೇಕು, ಸಚಿವನಾಗಿದ್ದೇನೆ, ಸಂತೃಪ್ತ. ನನ್ನ ಉದ್ಯಮದಲ್ಲಿ ಒಳ್ಳೆಯ ಆದಾಯ ಇದೆ, ಅಷ್ಟು ಸಾಕು.
ವಿಜಯವಾಣಿ: ನೀವು ಮತ್ತೆ ಅಧಿಕಾರಕ್ಕೆ ಬರೋ ವಿಶ್ವಾಸ ಇದೆಯಾ?
ಉಮೇಶ್ ಕತ್ತಿ: ಡಿಕೆಶಿ ಸಿದ್ದರಾಮಯ್ಯ ಒಟ್ಟಿಗೆ ಹೋದರೆ ನಮಗೆ ಕಷ್ಟ. ಅವರು ಒಟ್ಟಿಗೆ ಹೋಗುವುದು ಅನುಮಾನ. ನಾವೇ ದೊಡ್ಡ ಪಕ್ಷವಾಗಿ ಬರುತ್ತೇವೆ.
ನಿಮಗೇ ಮೊದಲು ಗುಂಡು ಹಾರಿಸಬೇಕು…
ಪತ್ರಕರ್ತರು: ರಾಜ್ಯದ ಕೆಲವು ಕಡೆ ಚಿರತೆ ಹಾವಳಿ ಇದೆ, ಇನ್ನು ಕೆಲವು ಕಡೆ ಆನೆ ಹಾವಳಿ ಇದೆಯಲ್ಲ… ಏನು ಮಾಡ್ತಿದೆ ಅರಣ್ಯ ಇಲಾಖೆ?
ಉಮೇಶ್ ಕತ್ತಿ: ಮೊದಲು ನಿಮಗೆ ಗುಂಡು ಹಾರಿಸಬೇಕು, ಆಗ ಎಲ್ಲ ಸರಿ ಆಗುತ್ತೆ. ನಾವು ಪ್ರಾಣಿಗಳ ಸ್ಥಳ ಆವರಿಸಿಕೊಂಡಿದ್ದೇವೆ. ಅವು ಏನು ಮಾಡ್ತವೆ? ಪತ್ರಕರ್ತರೇ ನೀವೇ ಹೇಳಿ ಏನು ಮಾಡಬೇಕು… ನಾನು ಹಾಗೆ ಮಾಡ್ತಿನಿ.
ಕತ್ತಿ ತಂದೆ ಅಧಿವೇಶನ ನಡೆಯುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು; ಪುತ್ರನೂ ಹೃದಯಾಘಾತಕ್ಕೆ ಬಲಿ..