ನವದೆಹಲಿ: ದಿನಸಿ ಖರೀದಿಗಾಗಿ ಕಿರಾಣಿ ಅಂಗಡಿಗೆ ಹೋದ ಇಬ್ಬರು ಮಹಿಳಾ ವೈದ್ಯರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ.
ಇದಕ್ಕೆ ಕಾರಣ ಕರೊನಾ ವೈರಸ್ !
ಜನರಲ್ಲಿ ಅದೆಷ್ಟರ ಮಟ್ಟಿಗೆ ಕರೊನಾ ವೈರಸ್ ಆತಂಕ, ಹತಾಶೆ ಕಾಡುತ್ತಿದೆ ಎಂದರೆ ವೈದ್ಯರು, ನರ್ಸ್ಗಳನ್ನು ಕಂಡರೂ ಕೆಲವರು ಸಿಟ್ಟಾಗುತ್ತಿದ್ದಾರೆ ಎಂಬುದಕ್ಕೆ ದಕ್ಷಿಣ ದೆಹಲಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಯ ಇಬ್ಬರ ವೈದ್ಯೆಯರು ಬುಧವಾರ ಸಂಜೆ ಗೌತಮ ನಗರದಲ್ಲಿರುವ ತಮ್ಮ ಮನೆಯ ಹತ್ತಿರದ ಕಿರಾಣಿ ಅಂಗಡಿಯೊಂದಕ್ಕೆ ದಿನಸಿ, ಅಗತ್ಯ ವಸ್ತುಗಳನ್ನು ಖರೀದಿಸಲು ತೆರಳಿದ್ದರು. ಈ ವೇಳೆ ವ್ಯಕ್ತಿಯೋರ್ವ ಬಂದು ಅವರನ್ನು ತಡೆದಿದ್ದಾನೆ. ಅಲ್ಲದೆ ಮನೆಯಿಂದ ಹೊರಗೆ ಬಂದಿದ್ದರ ಬಗ್ಗೆ ಆಕ್ರೋಶದಿಂದ ನಿಂದಿಸಿದ್ದಾನೆ.
ಅಷ್ಟಕ್ಕೇ ಸುಮ್ಮನಾಗದೆ ಸ್ಥಳೀಯ ಕೆಲವರೊಂದಿಗೆ ಸೇರಿ ವೈದ್ಯರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ಬಳಿಕ ಮಹಿಳಾ ವೈದ್ಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ. ಆತನ ಬಗ್ಗೆ ಮಾಹಿತಿ ನೀಡಲು ಸ್ಥಳೀಯರು ಹಿಂದೇಟು ಹಾಕಿದ್ದಾರೆ.
ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಒಳಾಂಗಣ ವಿನ್ಯಾಸಕಾರ ಎನ್ನಲಾಗಿದೆ. ವೈದ್ಯರು ಆಸ್ಪತ್ರೆಗಳಿಂದ ಹೊರಬರುವುದರಿಂದ ಕರೊನಾ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವರ ಆಸ್ಪತ್ರೆಯಲ್ಲಿ ಯಾರಾದರೂ ಕರೊನಾ ಸೋಂಕಿತರು ಇದ್ದರೆ, ಅವರಿಗೆ ಚಿಕಿತ್ಸೆ ನೀಡುತ್ತಿರುತ್ತಾರೆ. ಹೀಗಿರುವಾಗ ವೈದ್ಯರು ಹೊರಗೆ ಓಡಾಡಿದರೆ ಅಪಾಯ ಎಂದು ಆತ ಪೊಲೀಸರಿಗೆ ಹೇಳಿದ್ದಾನೆ.
ಗಾಯಗೊಂಡ ವೈದ್ಯೆಯರನ್ನು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದೆಹಲಿಯಲ್ಲಿ ಒಟ್ಟು 669 ಕರೊನಾ ಸೋಂಕಿತರು ಇದ್ದಾರೆ. 9 ಮಂದಿ ಮೃತಪಟ್ಟಿದ್ದು, ಭಾರತದ ಕರೊನಾ ಹಾಟ್ಸ್ಫಾಟ್ಗಳಲ್ಲಿ ದೆಹಲಿಯೂ ಒಂದು. ದಿನದಿಂದ ದಿನಕ್ಕ ಏರುತ್ತಿರುವ ಸೋಂಕಿತರ ಸಂಖ್ಯೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. (ಏಜೆನ್ಸೀಸ್)