ಹುಣಸೂರು: ತಾಲೂಕಿನ ರತ್ನಪುರಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಜತೆಗೆ ಜೀರ್ಣೋದ್ಧಾರಕ್ಕಾಗಿ ಸಂಸದರ ನಿಧಿಯಿಂದ 20 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂಸು ಸಂಸದ ಪ್ರತಾಪ್ಸಿಂಹ ತಿಳಿಸಿದರು.
ಶುಕ್ರವಾರ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿಯ 60ನೇ ವರ್ಷದ ಮಹಾಭಿಷೇಕ ಮತ್ತು ಪಲ್ಲಕ್ಕಿ ಉತ್ಸವದ ಅಂಗವಾಗಿ ಆಯೋಜನೆಗೊಂಡಿದ್ದ ಜಾನುವಾರುಗಳ ಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಐತಿಹಾಸಿಕ ಮಹತ್ವನ್ನು ಹೊಂದಿರುವ ರತ್ನಪುರಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದೇ ಸಂಭ್ರಮ. ದೇವಾಲಯದ ಜೀರ್ಣೋದ್ಧಾರ ಅತ್ಯಗತ್ಯವಾಗಿ ಆಗಬೇಕಿದ್ದು, ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿ ದೇವಾಲಯವಿರುವುದರಿಂದ ಜೀಣೋದ್ಧಾರದ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ. ಅಲ್ಲದೆ ಜೀರ್ಣೋದ್ಧಾರಕ್ಕಾಗಿ ಸಂಸದರ ನಿಧಿಯಿಂದ 20 ಲಕ್ಷ ರೂ. ಮೀಸಲಿಡುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಆಂಜನೇಯಸ್ವಾಮಿ ಜಾತ್ರೆ ಸಮಿತಿ ಅಧ್ಯಕ್ಷ ಆರ್.ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಸುರೇಂದ್ರ, ಕಾರ್ಯದರ್ಶಿ ರಾಜು, ಸುದರ್ಶನ್ ಸಿಂಗ್, ನಂದೀಶ್ ಮತ್ತಿತರರಿದ್ದರು.