ತುಮಕೂರು: ಜೆಡಿಎಸ್ ಪಾಲಿನ “ಕಲ್ಪವೃಕ್ಷ’ವೆನಿಸಿರುವ ತುಮಕೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಯಶಸ್ವಿಯಾಗಿ ಪಂಚರತ್ನ ರಥಯಾತ್ರೆ ಮುಗಿಸಿರುವ ಎಚ್.ಡಿ.ಕುಮಾರಸ್ವಾಮಿ, ಇಂದಿನಿಂದ ಎರಡನೇ ಹಂತದಲ್ಲಿ ಪಕ್ಷ ಶಕ್ತಿಶಾಲಿಯಾಗಿರುವ ಇನ್ನುಳಿದಿರುವ ನಾಲ್ಕು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲಿದ್ದಾರೆ. ಇದರ ನಡುವೆಯೇ ತುಮಕೂರು ನಗರ ಜೆಡಿಎಸ್ನಲ್ಲಿ “ಆಡಿಯೋ ಸದ್ದು” ಮಾಡುತ್ತಿದೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರ ನಡುವಿನ ಗಲಾಟೆ ಬೀದಿರಂಪವಾಗಿದೆ. ಬೆಂಗಳೂರಿನ ಉದ್ಯಮಿಯಿಂದ ಜೆಡಿಎಸ್ ಅಭ್ಯರ್ಥಿ 4 ಕೋಟಿ ರೂಪಾಯಿ ಪಡೆದು ಸ್ಪರ್ಧೆಗೆ ಹಿಂದೇಟು ಹಾಕಿದ್ದ ಬಗ್ಗೆ ಸಾಕ್ಷಿ ಸಮೇತ ಕುಮಾರಸ್ವಾಮಿಗೆ ದೂರು ನೀಡಿದ್ದೇವೆ ಎಂದು ಜೆಡಿಎಸ್ ಮುಖಂಡರೊಬ್ಬರು ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಆಗಿದ್ದು, ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕುಮಾರಸ್ವಾಮಿ ಪಂಚರತ್ನ ಯಾತ್ರೆ ಸಂದರ್ಭದಲ್ಲಿಯೇ ಇಂತಹದೊಂದು ಆಡಿಯೋ ವಿವಾದ ಬೀದಿಗೆ ಬಂದಿರುವುದು ಜೆಡಿಎಸ್ಗೆ ಇರಿಸು-ಮುರಿಸು ಉಂಟುಮಾಡಿದೆ.
ಡಿ.11ರಿಂದ ನಡೆಯಬೇಕಿದ್ದ ಯಾತ್ರೆ ಮಳೆಯ ಕಾರಣದಿಂದ ಮುಂದೂಡಿಕೆಯಾಗಿತ್ತು. ಡಿ.27ರಂದು ತುರುವೇಕೆರೆ, 28 ಚಿಕ್ಕನಾಯಕನಹಳ್ಳಿ, 29ರಂದು ಕುಣಿಗಲ್ ಹಾಗೂ 30ರಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾತ್ರೆ ಸಾಗಲಿದೆ. ರಾಷ್ಟ್ರೀಯ ಪಕ್ಷಕ್ಕೆ ಹೋಲಿಸಿದರೆ ಜೆಡಿಎಸ್ನಲ್ಲಿ ಟಿಕೆಟ್ ಗೊಂದಲ ಬಗೆಹರಿದಿದ್ದು, ಟಿಕೆಟ್ ಘೋಷಣೆಯ ನಂತರ ನಡೆಯುತ್ತಿರುವ ಯಾತ್ರೆಯಾದ್ದರಿಂದ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.
ಎರಡನೇ ಹಂತದ ಯಾತ್ರೆ ಸಾಗುತ್ತಿರುವ ಮಾರ್ಗದಲ್ಲಿ ಜೆಡಿಎಸ್ ಹೆಚ್ಚು ಪ್ರಭಲವಾಗಿದೆ. ಅಹಿಂದ ಮತದಾರರು ಹೆಚ್ಚಾಗಿರುವ ಚಿಕ್ಕನಾಯಕನಹಳ್ಳಿಯೂ ಪಕ್ಷ ಶಕ್ತಿಶಾಲಿಯಾಗಿದೆ, ಇನ್ನುಳಿದ ಮೂರು ಕ್ಷೇತ್ರದಲ್ಲಿ ಒಕ್ಕಲಿಗರ ಭದ್ರಕೋಟೆಯಾಗಿದ್ದು ಕುಮಾರಸ್ವಾಮಿ ಪರವಾದ ಅಲೆಯ ನಿರೀಕ್ಷೆ ಜೆಡಿಎಸ್ಗಿದೆ.
ತುರುವೇಕೆರೆಯಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿಯಲ್ಲಿ ಸಿ.ಬಿ.ಸುರೇಶ್ಬಾಬು, ತುಮಕೂರು ಗ್ರಾಮಾಂತರದಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ಪಕ್ಷದ ಅಧಿಕೃತ ಅಭ್ಯಥಿರ್ಗಳಾಗಿದ್ದು, ಯಾವುದೇ ಪೈಪೋಟಿಯಿಲ್ಲ. ಆದರೆ, ಕುಣಿಗಲ್ ಕ್ಷೇತ್ರದಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ ಅವರಿಗೆ ಟಿಕೆಟ್ ಘೋಷಿಸಲಾಗಿದ್ದರೂ ವಯಸ್ಸಿನ ಕಾರಣ ಮುಂದಿಟ್ಟುಕೊಂಡು ಕೊನೇ ಕ್ಷಣದಲ್ಲಿ ಅವರ ಪುತ್ರರಿಬ್ಬರಲ್ಲಿ ಒಬ್ಬರನ್ನು ಜೆಡಿಎಸ್ ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಜ.20ಕ್ಕೆ ತಿಪಟೂರಿನಲ್ಲಿ ಯಾತ್ರೆ?: ತಿಪಟೂರು ಕ್ಷೇತ್ರದಲ್ಲಿ ಪಕ್ಷ ಮುನ್ನೆಡೆಸುವ ಸಾರಥಿಯ ಹುಡುಕಾಟ ಆರಂಭಿಸಲಾಗಿದ್ದು, ಜ.20ರಂದು ಯಾತ್ರೆ ಆಯೋಜಿಸುವ ಸಾಧ್ಯತೆಯಿದೆ. ಕಾಂಗ್ರೆಸ್ನಲ್ಲಿ ಟಿಕೆಟ್ಗೆ ಅಜಿರ್ ಹಾಕಿರುವ ಪ್ರಮುಖ ನಾಯಕರೊಬ್ಬರಿಗೆ ಜೆಡಿಎಸ್ ಗಾಳ ಹಾಕಿದ್ದು, ಅವರನ್ನು ಸೇರ್ಪಡೆ ಮಾಡಿಕೊಂಡು ಯಾತ್ರೆ ನಡೆಸಲಿದೆ ಎಂಬ ಗುಸುಗುಸು ಕ್ಷೇತ್ರದೆಲ್ಲೆಡೆ ಕೇಳಿಬರುತ್ತಿದೆ. ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿರುವ ಕ್ಷೇತ್ರಗಳ ಪೈಕಿ ತಿಪಟೂರು ಹಾಗೂ ಶಿರಾದಲ್ಲಿ ಸಾರಥಿಗಾಗಿ ಹುಡುಕಾಟವಿದೆ. ಈ ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಟಿಕೆಟ್ ಕೈತಪ್ಪುವವರಿಗೆ ಬಲೆ ಬೀಸಲಾಗಿದೆ ಎಂಬ ಮಾತುಗಳಿವೆ.
ತಿಪಟೂರಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಪಿಡಿಒ ಸೇರಿ ಮೂವರ ಬಂಧನ
ಪಂಚರತ್ನ ರಥಯಾತ್ರೆಗೆ ಆಗಮಿಸಿದ್ದವರಿಗೆ ಅಪಘಾತ: ಇಬ್ಬರ ಸ್ಥಿತಿ ಗಂಭೀರ, 10 ಮಂದಿಗೆ ಗಾಯ