ಸೋರಲಮಾವು ಶ್ರೀಹರ್ಷ
ತುಮಕೂರು: ಲೋಕಸಭಾ ಚುನಾವಣೆ ಚುನಾವಣೆಗೆ ಬಿಜೆಪಿ ಜತೆ ಮೈತ್ರಿ ನಂತರ ಜಿಲ್ಲೆಯಲ್ಲಿ ಸಂಘಟನೆಯನ್ನೇ ಮಂಕಾಗಿಸಿರುವ ಜೆಡಿಎಸ್ ತಡವಾಗಿಯಾದರೂ ಉಸ್ತುವಾರಿ ಹಾಗೂ ಸಹಉಸ್ತುವಾರಿಗಳನ್ನು ನೇಮಿಸಿದೆ.
ತುಮಕೂರು ಕ್ಷೇತ್ರದ ಉಸ್ತುವಾರಿಯಾಗಿ ಚಿಕ್ಕನಾಯಕನಹಳ್ಳಿ ಶಾಸಕರೂ ಆದ ಜೆಡಿಎಸ್ ಕಾರ್ಯಾಧ್ಯಕ್ಷ ಸಿ.ಬಿ.ಸುರೇಶ್ಬಾಬು, ಸಹ ಉಸ್ತುವಾರಿಗಳಾಗಿ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಕೊರಟಗೆರೆ ಮಾಜಿ ಶಾಸಕ ಸುಧಾಕರ್ಲಾಲ್ ಹಾಗೂ ತುಮಕೂರು ನಗರದ ಪರಾಜಿತ ಅಭ್ಯರ್ಥಿ ಗೋವಿಂದರಾಜು ನೇಮಕ ಮಾಡಲಾಗಿದೆ.
ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರೇ ಗೆಲ್ಲಲು ಸಾಧ್ಯವಾಗಿಲ್ಲ ಹಾಗೂ ಹಿಂದೆAದೂ ಗೆದ್ದ ಉದಾಹರಣೆ ಇಲ್ಲ ಎಂಬ ಕಾರಣ ಮುಂದಿಟ್ಟುಕೊAಡು ಮೈತ್ರಿ ಧರ್ಮದಂತೆ ಬಿಜೆಪಿ ಕ್ಷೇತ್ರಕ್ಕೆ ಪಟ್ಟುಹಿಡಿದಿದ್ದು ಜೆಡಿಎಸ್ ಯುದ್ಧಕ್ಕೆ ಮುಂಚೆಯೇ ಶಸ್ತçತ್ಯಾಗ ಮಾಡಿದಂತಿದೆ.
ಜಿಲ್ಲೆಯಲ್ಲಿ ಜೆಡಿಎಸ್ಗೆ ಬೆನ್ನುಲುಬು ಎನ್ನಿಸಿದ್ದ ಎಸ್.ಆರ್.ಶ್ರೀನಿವಾಸ್ ಹಾಗೂ ಡಿ.ಸಿ.ಗೌರಿಶಂಕರ್ ಪಕ್ಷ ತೊರೆದು ಕಾಂಗ್ರೆಸ್ ತೆಕ್ಕೆಗೆ ಜಾರಿದ ನಂತರ ಜೆಡಿಎಸ್ ತುಮಕೂರು ಕ್ಷೇತ್ರಕ್ಕೆ ಹಠಹಿಡಿಯುವ ಸಾಧ್ಯತೆಯಿಲ್ಲ. ಈ ನಡುವೆ ಉಸ್ತುವಾರಿಗಳ ನೇಮಕವಾಗಿದ್ದು ಬಿಜೆಪಿ ಜತೆ ಮೈತ್ರಿಯ ಕಸರತ್ತು ನಡೆಸಬೇಕಿದೆ.
ಮೈತ್ರಿಯ ನೆಪಮಾಡಿಕೊಂಡು ರಾಜಕೀಯ ಅಸ್ಥಿತ್ವ ಪ್ರಶ್ನೆ ಮುಂದಿಟ್ಟ ತುಮಕೂರು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಜೆಡಿಎಸ್ಗೆ ಗುಡ್ಬೈ ಹೇಳಿಹೋದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಖಂಡರನ್ನು ಹಿಡಿದಿಟ್ಟುಕೊಂಡು ಶಕ್ತಿ ಉಳಿಸಿಕೊಳ್ಳುವ ಅನಿವಾರ್ಯತೆಯಿದೆ.
ಈ ಬಗ್ಗೆ ಜೆಡಿಎಸ್ ಮುಖಂಡರು ವರಿಷ್ಠರಿಗೆ ಮನವರಿಕೆ ಮಾಡಿರುವ ಹಿನ್ನೆಲೆಯಲ್ಲಿ ಸಮರ್ಥ ಅಭ್ಯರ್ಥಿ ಸಿಕ್ಕರೆ ಕ್ಷೇತ್ರಕ್ಕೆ ಪಟ್ಟು ಹಿಡಿಯಬಹುದು ಎಂಬ ರಾಜಕೀಯ ತಂತ್ರಗಾರಿಕೆಯಾಗಿ ಅನ್ಯಪಕ್ಷಗಳಲ್ಲಿರುವ ಮುಖಂಡರನ್ನು ಪಕ್ಷಕ್ಕೆ ಕರೆತೆಲು ಖುದ್ದು ಜೆಡಿಎಸ್ ಕಾರ್ಯಾಧ್ಯಕ್ಷ ಸಿ.ಬಿ.ಸುರೇಶ್ಬಾಬು ತೆರೆಮರೆಯ ಕಸರತ್ತು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಸಿಬಿಎಸ್ಗೆ ಡಬಲ್ ಧಮಾಕ:
ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಸಿ.ಬಿ.ಸುರೇಶ್ಬಾಬು ಅವರಿಗೆ ಜೆಡಿಎಸ್ ವಿಶೇಷ ಮನ್ನಣೆ ನೀಡಿದೆ. ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ನೇಮಿಕವಾದ ಬೆನ್ನಹಿಂದೆಯೇ ತುಮಕೂರು ಕ್ಷೇತ್ರದ ಉಸ್ತುವಾರಿಯಾಗಿಯೂ ನೇಮಿಸಲಾಗಿದೆ.
ಕುರುಬ ಸಮುದಾಯದ ಸಿ.ಬಿ.ಸುರೇಶ್ಬಾಬು ಜೆಡಿಎಸ್ ಪಕ್ಷದಲ್ಲಿ ಹಿರಿಯ ಶಾಸಕರಾಗಿದ್ದು ಪಕ್ಷದಲ್ಲಿ ವಿಶೇಷ ಮನ್ನಣೆ ದೊರೆಯುತ್ತಿದೆ. ಇದೇ ಕಾರಣಕ್ಕಾಗಿ ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದಲೇ ಕಣಕ್ಕಿಳಿಸಬೇಕು ಎಂಬ ಪ್ರಯತ್ನ ನಡೆಸಿದ್ದಾರೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ರಾಜಕೀಯ ವಿರೋಧ ಜೆ.ಸಿ.ಮಾಧುಸ್ವಾಮಿ ಮೈತ್ರಿ ಅಭ್ಯರ್ಥಿಯಾಗುವುದು ಸಿಬಿಎಸ್ಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಜ್ಯೋತಿಪ್ರಕಾಶ್ ಮಿರ್ಜಿ ಜೆಡಿಎಸ್ ಸೇರ್ಪಡೆ ಅಚ್ಚರಿ!
ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿಪ್ರಕಾಶಮಿರ್ಜಿ ಸೋಮವಾರ ಬೆಂಗಳೂರಿನಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ರಾಜಕೀಯ ಕುಟುಂಬದ ಹಿನ್ನೆಲೆಯಲ್ಲಿ ಮಿರ್ಜಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಸೇರ್ಪಡೆಯಾಗಿರುವ ಬಗ್ಗೆ ಜಿಲ್ಲೆಯಲ್ಲಿ ತರಹೇವಾರಿ ಚರ್ಚೆಗೆ ಕಾರಣವಾಗಿದೆ.
ಜ್ಯೋತಿಪ್ರಕಾಶಮಿರ್ಜಿ ಅವರ ತಂದೆ ಬಿ.ಪಿ.ಗಂಗಾಧರ್ ತುಮಕೂರು ಕ್ಷೇತ್ರದಿಂದ 1967ರಲ್ಲಿ ಪ್ರಜಾಸೋಶಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಫರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಸೀಟು ಹಂಚಿಕೆಯಲ್ಲಿ ತುಮಕೂರುಗೆ ಜೆಡಿಎಸ್ ಪಟ್ಟು:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಅತೀ ಹೆಚ್ಚು 469218 ಮತ ಪಡೆದಿದ್ದು ಮಿತ್ರಪಕ್ಷ ಬಿಜೆಪಿ ಮೂರನೇ ಸ್ಥಾನದಲ್ಲಿದ್ದು 414421ಮತ ಪಡೆದಿದೆ. ಎರಡೂ ಪಕ್ಷಗಳೂ ತಲಾ ಇಬ್ಬರು ಶಾಸಕರನ್ನು ಹೊಂದಿದ್ದು ಟಿಕೆಟ್ ಹಂಚಿಕೆ ಸಮಯದಲ್ಲಿ ಜಿದ್ದಾಜಿದ್ದಿನ ಚರ್ಚೆ ನಿಶ್ಚಿತ.
ಕ್ಷೇತ್ರಕ್ಕಾಗಿ ಪಟ್ಟುಹಿಡಿಯಲು ಸಮರ್ಥ ಅಭ್ಯರ್ಥಿಗಳನ್ನು ತೋರಿಸುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ವೀರಶೈವ ಸಮುದಾಯದ ಜ್ಯೋತಿಪ್ರಕಾಶ್ ಮಿರ್ಜಿ ಅವರನ್ನು ಜೆಡಿಎಸ್ ಸೇರ್ಪಡೆ ಮಾಡಿಕೊಂಡಿದೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.