ಪುಣೆ: ಅಲ್ಟಿಮೇಟ್ ಟೇಬಲ್ ಟೆನಿಸ್ ಲೀಗ್ನ 4ನೇ ಆವೃತ್ತಿಯಲ್ಲಿ ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ನೇತೃತ್ವದ ಬೆಂಗಳೂರು ಸ್ಮಾಷರ್ಸ್ ತಂಡದ ಜೆರ್ಸಿಯನ್ನು ಗುರುವಾರ ಅನಾವರಣಗೊಳಿಸಲಾಯಿತು.
ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮನಿಕಾ ಬಾತ್ರಾ, ಅಲ್ಟಿಮೇಟ್ ಟೇಬಲ್ ಟೆನಿಸ್ ಸೀಸನ್ -4 ಮುಂಬರುವ ಏಷ್ಯನ್ ಗೇಮ್ಸ್ಗೆ ಮುನ್ನ ಪೂರ್ವಭಾವಿ ಸಿದ್ಧತೆಗೆ ವೇದಿಕೆಯಾಗಿದೆ. ಮುಂದಿನ 15 ದಿನ ಬೆಂಗಳೂರು ಸ್ಮಾಷರ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೆನೆ ಎಂದು ತಿಳಿಸಿದರು.
ಬೆಂಗಳೂರು ತಂಡವನ್ನು ಸ್ವಾಗತಿಸಿ ಮಾತನಾಡಿದ ಪುನಿತ್ ಬಾಲನ್ ಗ್ರೂಪ್ (ಪಿಬಿಜಿ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪುನೀತ್ ಬಾಲನ್, ಲೀಗ್ನ ಭಾಗವಾಗಿರುವುದಕ್ಕೆ ಹೆಮ್ಮೆಎನಿಸಿದೆ. ಟೇಬಲ್ ಟೆನಿಸ್ ಅನ್ನು ಬೆಂಬಲಿಸುವುದರ ಜತೆಗೆ ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವಕಾಶ ಲಭಿಸಿದೆ. ಭಾರತಕ್ಕೆ ಒಲಿಂಪಿಕ್ಸ್ ಮತ್ತು ಇತರ ಕ್ರೀಡಾ ಕೂಟಗಳಲ್ಲಿ ಪದಕಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುವುದು ನಮ್ಮ ದೃಷ್ಟಿಕೋನವಾಗಿದೆ ಎಂದರು.
ಬೆಂಗಳೂರು ಸ್ಮಾಷರ್ಸ್ ತಂಡವನ್ನು ಕಿರಿಲ್ ಗೆರಾಸ್ಸಿಮೆಂಕೊ ಮುನ್ನಡೆಸಲಿದ್ದು, ಖೇಲ್ ರತ್ನ ಪ್ರಶಸ್ತಿ ವಿಜೇತೆ ಮನಿಕಾ, ಕಜಕಿಸ್ತಾನದ ಕಿರಿಲ್ ಗೆರಾಸಿಮೆಂಕೊ, ಒಲಿಂಪಿಯನ್ ಮತ್ತು ಯುರೋಪಿಯನ್ ಟೀಮ್ ಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತ ಪೋಲೆಂಡ್ನ ನಟಾಲಿಯಾ ಬಜೋರ್, ಅನುಭವಿ ಸುನಿಲ್ ಶೆಟ್ಟಿ ಮತ್ತು ಪೊಯ್ಮಂಟಿ ಬೈಸ್ಯಾ ಮತ್ತು ಜೀತ್ ಚಂದ್ರ ತಂಡದಲ್ಲಿದ್ದಾರೆ.
ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದ ಮಾಲೀಕ ಪುನೀತ್ ಬಾಲನ್, ಮನಿಕಾ ಬಾತ್ರಾ, ತರಬೇತುದಾರರಾದ ಸಚಿನ್ ಶೆಟ್ಟಿ (ಭಾರತ) ಮತ್ತು ವೆಸ್ನಾ ಓಜ್ಸರ್ಸೆಕ್ (ಸ್ಲೊವೇನಿಯಾ) ಹಾಜರಿದ್ದರು.