ಬೆಂಗಳೂರು: ಮೊಬೈಲ್ ಆ್ಯಪ್ ಆಧಾರಿತ ರ್ಯಾಪಿಡೋ ಸಂಸ್ಥೆ (ಬೈಕ್ ಟ್ಯಾಕ್ಸಿ) ತನ್ನ ಜಾಹೀರಾತಿನಲ್ಲಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಅಪಮಾನ ಮಾಡಿ ಎಡವಟ್ಟಿಗೆ ಸಿಲುಕಿದೆ.
ಟಾಲಿವುಡ್ ನಟ ಅಲ್ಲು ಅರ್ಜುನ್ ನಟಿಸಿರುವ ರ್ಯಾಪಿಡೋ ಜಾಹೀರಾತಿನಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್ಆರ್ಟಿಸಿ) ಬಸ್ನಲ್ಲಿ ಪ್ರಯಾಣಿಕರ ನೂಕುನುಗ್ಗಲು ಇರುವ ವಿಡಿಯೋ ಬಳಸಿದ್ದಾರೆ. ಅದನ್ನು ಪ್ರಶ್ನಿಸಿ ಟಿಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ, ಐಪಿಎಸ್ ಅಧಿಕಾರಿ ವಿ. ಸಿ. ಸಜ್ಜನರ್, ರ್ಯಾಪಿಡೋ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದರು. ಆಗ ರ್ಯಾಪಿಡೋ ಸಂಸ್ಥೆ ಕೇವಲ ಬಸ್ಸಿನ ಬಣ್ಣ ಬದಲಾಯಿಸಿ ಜಾಹೀರಾತು ಮುಂದುವರಿಸಿತ್ತು.
ಅದನ್ನು ಒಪ್ಪದ ಟಿಎಸ್ಆರ್ಟಿಸಿ, ರ್ಯಾಪಿಡೋ ಕಂಪನಿ ವಿರುದ್ಧ ನಾಂಪಲ್ಲಿ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿತ್ತು. ಸಾರ್ವಜನಿಕ ಸಾರಿಗೆ ಸೇವೆ ಸುರಕ್ಷತೆ ಮತ್ತು ಸಮರ್ಪಕ ಸೇವೆ ಇಲ್ಲ ಎಂದು ಜಾಹೀರಾತಿನಲ್ಲಿ ಮಾನಹಾನಿಕರವಾಗಿ ಬಿಂಬಿಸಲಾಗಿದೆ. ಈ ಜಾಹೀರಾತು ಪ್ರದರ್ಶನವನ್ನು ನಿರ್ಬಂಧಿಸಬೇಕು. ಅದನ್ನು ಗೂಗಲ್, ಯೂ-ಟ್ಯೂಬ್ನಿಂದ ತೆಗೆದುಹಾಕಲು ಸೂಚನೆ ನೀಡಬೇಕು ಎಂದು ಮನವಿ ಮಾಡಿತ್ತು.
ಅದನ್ನು ಪುರಸ್ಕರಿಸಿದ ನ್ಯಾಯಾಲಯ ಮಾನಹಾನಿಕರ ಜಾಹೀರಾತು ನಿಲ್ಲಿಸುವಂತೆ ಆದೇಶಿಸಿದೆ. ಈ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಸಾರ್ವಜನಿಕ ಸ್ವತ್ತು ಮತ್ತು ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಿ ಬಳಸುವ ಮೂಲಕ ಪ್ರೋತ್ಸಾಹಿಸಬೇಕು. ಸ್ವಂತ ಲಾಭಕ್ಕಾಗಿ ಮಾನಹಾನಿ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆ ಮತ್ತು ಉತ್ತಮ ಸೇವೆ ಒದಗಿಸಲಾಗುತ್ತಿದೆ. ಸ್ವಂತ ಲಾಭಕ್ಕಾಗಿ ಸಾರ್ವಜನಿಕ ಸೇವೆಯನ್ನು ದೂಷಿಸುವುದು ಸರಿಯಲ್ಲ.
| ವಿ.ಸಿ. ಸಜ್ಜನರ್ ವ್ಯವಸ್ಥಾಪಕ ನಿರ್ದೇಶಕ ಟಿಎಸ್ಆರ್ಟಿಸಿ
ನಾಳೆ ಏನಾಗಬಹುದು ಅಲ್ಲಿ..!? ಎಂಬ ಕುತೂಹಲ ಹುಟ್ಟಿಸಿದೆ ಕೃಷ್ಣ ಜನ್ಮಭೂಮಿ; ಪೂರಕವೆಂಬಂತೆ ಟ್ರೆಂಡಿಂಗ್ನಲ್ಲಿ ಮಥುರಾ!