| ದೇವರಾಜ್ ಕನಕಪುರ ಬೆಂಗಳೂರು
ಗೊಂದಲದ ಗೂಡಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೊನೆಗೂ ಅಂತಿಮ ಹಂತ ತಲುಪಿದೆ. ಈ ಬಾರಿ 20 ಸಾವಿರ ಶಿಕ್ಷಕರು ವರ್ಗಾವಣೆಯ ಲಾಭ ಪಡೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 4 ಸಾವಿರದಷ್ಟು ಹೆಚ್ಚು ಶಿಕ್ಷಕರು ವರ್ಗಾವಣೆಯಾಗಿದ್ದಾರೆ.
ಶೇಕಡವಾರು ಕಳೆದ ಬಾರಿಗಿಂತ ದುಪ್ಪಟ್ಟು ಫಲಿತಾಂಶ ಸಿಕ್ಕಿದೆ. ಕಳೆದ ಬಾರಿ ಅರ್ಜಿ ಸಲ್ಲಿಸಿದವರಲ್ಲಿ ಶೇ.15.02 ಶಿಕ್ಷಕರು ವರ್ಗಾವಣೆ ಹೊಂದಿದ್ದರೆ, ಈ ಬಾರಿ ಶೇ.31.09 ತಲುಪಿದೆ. 2-3 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಶಿಕ್ಷಕರ ವರ್ಗಾವಣೆ ಸತತ ವಿಘ್ನಗಳಿಂದಾಗಿ ಒಂದು ವರ್ಷಕ್ಕೂ ಹೆಚ್ಚಿನ ಅವಧಿ ತೆಗೆದುಕೊಂಡಿತು. ಈ ಅವಧಿಯಲ್ಲಿ ಒಟ್ಟಾರೆ 4 ಬಾರಿ ಕೋರ್ಟ್ನಿಂದ ಸ್ಥಗಿತ, ಯಥಾಸ್ಥಿತಿ ಆದೇಶ ಬಂದ ಹಿನ್ನೆಲೆಯಲ್ಲಿ ಸ್ಥಗಿತಗೊಂಡು ಮತ್ತೆ ಆರಂಭಗೊಂಡಿತ್ತು.
2020-21ನೇ ಸಾಲಿನ ವರ್ಗಾವಣೆಗೆ 65,296 ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಪ್ರಾಥಮಿಕ-15,189, ಪ್ರೌಢಶಾಲೆ- 5115 ಶಿಕ್ಷಕರು ಸೇರಿ 20,304 ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ. 2019ರಲ್ಲಿ ಕೊನೆಯದಾಗಿ ವರ್ಗಾವಣೆ ನಡೆದಿತ್ತು. ಆಗಲೂ ಪ್ರಕ್ರಿಯೆ 1 ವರ್ಷ 10 ತಿಂಗಳು ನಡೆದಿತ್ತು. 1,09,782 ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 16,490 ಶಿಕ್ಷಕರು ವರ್ಗಾವಣೆಯಾಗಿದ್ದರು. ಅಂದರೆ, ವರ್ಗಾವಣೆ ಲಾಭ ಪಡೆದ ಶಿಕ್ಷಕರ ಪ್ರಮಾಣ ಶೇ.15 ಇತ್ತು. ಹೊಸದಾಗಿ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣಾ ನಿಯಂತ್ರಣ) ನಿಯಮ -2020ಗೆ ನಿಯಮ ರೂಪಿಸಿ ನಡೆಸಿರುವ ಮೊದಲ ವರ್ಗಾವಣೆ ಇದಾಗಿದೆ.
ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಶಿಕ್ಷಕರಿಗೆ ವರ್ಗಾವಣೆ ಸಿಕ್ಕಿದೆ. ಇದರಿಂದ ಶಿಕ್ಷಕರು ಕೂಡ ಖುಷಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಪ್ರಯೋಗಗಳನ್ನು ನಡೆಸಲು ಆಲೋಚಿಸಲಾಗಿದೆ.
| ಬಿ.ಸಿ.ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ವರ್ಗಾವಣೆಯಾಗಿರುವುದು ಖುಷಿಯ ವಿಚಾರ. ಆದರೆ, ಘಟಕದ ಹೊರಗೆ ಮತ್ತಷ್ಟು ವರ್ಗಾವಣೆಯಾಗಬೇಕಾಗಿತ್ತು ಎಂಬುದು ನಮ್ಮ ಬೇಡಿಕೆ. ಮುಂದಿನ ವರ್ಗಾವಣೆಯಲ್ಲಾದರೂ, ಈಡೇರಿಸುತ್ತಾರೆ ಎಂಬ ಭರವಸೆ ಇಟ್ಟುಕೊಳ್ಳುತ್ತೇವೆ.
| ಚಂದ್ರಶೇಖರ ನುಗ್ಗಲಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ವಿಭಾಗವಾರು ವರ್ಗಾವಣೆ: ಕಳೆದ ಬಾರಿ ಕಡ್ಡಾಯ ವರ್ಗಾವಣೆ ಹೆಚ್ಚು ಸದ್ದು ಮಾಡಿತ್ತು. ಇದರಿಂದಾಗಿಯೇ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಕಳೆದ ಬಾರಿ ಕಡ್ಡಾಯ ವರ್ಗಾವಣೆ ಶಿಕ್ಷೆಗೆ ಒಳಗಾಗಿದ್ದ ಶಿಕ್ಷಕರಿಗೆ ಈ ಬಾರಿ ವರ್ಗಾವಣೆಯಲ್ಲಿ ಮೊದಲ ಆದ್ಯತೆ ನೀಡಲಾಗಿತ್ತು. ಆ ಪ್ರಕಾರ 1,878 ಶಿಕ್ಷಕರು ಈ ಭಾಗದಲ್ಲಿ ವರ್ಗಾವಣೆ ಪಡೆದಿದ್ದಾರೆ. ನಿರ್ದಿಷ್ಟ ಹುದ್ದೆಗಳಲ್ಲಿ 1,823 ಹಾಗೂ ಕೋರಿಕೆಯಲ್ಲಿ 14,511 ಹಾಗೂ ಪರಸ್ಪರದಲ್ಲಿ 2092 ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ.
ಜಿಲ್ಲಾವಾರು ಮಾಹಿತಿ: ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಅತಿ ಹೆಚ್ಚು ವರ್ಗಾವಣೆ ಲಾಭ ಪಡೆದಿರುವ ಪಟ್ಟಿಯಲ್ಲಿ ವಿಜಯಪುರದಲ್ಲಿ 1,220 ಹಾಗೂ ಮೈಸೂರು 1,033 ಶಿಕ್ಷಕರು ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ. ಅತಿ ಕಡಿಮೆ ವರ್ಗಾವಣೆ ಪಡೆದಿರುವ ಪಟ್ಟಿಯಲ್ಲಿ ಯಾದಗಿರಿ- 223 ಹಾಗೂ ಬೆಂಗಳೂರು ಉತ್ತರ 240 ಶಿಕ್ಷಕರಿದ್ದಾರೆ.
ಕೋರ್ಟ್ ಕೇಸ್ಗಳಿಂದ ಹಿನ್ನಡೆ: ಪ್ರತಿ ಬಾರಿ ಶಿಕ್ಷಕರ ವರ್ಗಾವಣೆ ಆರಂಭವಾದಾಗ ಕೋರ್ಟ್ ಕೇಸ್ಗಳಿಂದ ಹಿನ್ನಡೆಯಾಗುತ್ತದೆ. ಹೆಚ್ಚುವರಿ-ಕಡ್ಡಾಯ ವರ್ಗಾವಣೆ ಸಂಬಂಧ ಶಿಕ್ಷಕರು ನಾಲ್ಕು ಬಾರಿ ಕೋರ್ಟ್ ಮೆಟ್ಟಿಲೇರಿ ವರ್ಗಾವಣೆ ಪ್ರಕ್ರಿಯೆಗೆ ತಡೆ ತಂದಿದ್ದರು. ಮೊದಲ ಬಾರಿ ತಡೆ ತಂದಾಗ ಶಿಕ್ಷಣ ಇಲಾಖೆ ಮೇಲ್ಮನವಿ ಸಲ್ಲಿಸಿ ಮತ್ತೆ ವರ್ಗಾವಣೆ ಪ್ರಕ್ರಿಯೆ ಚಾಲನೆ ಪಡೆಯುವುದಕ್ಕೆ ಮೂರು ನಾಲ್ಕು ತಿಂಗಳುಗಳೇ ಬೇಕಾಗಿತ್ತು. ಆನಂತರದಲ್ಲಿ ಬಂದ ಮೂರು ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಿಕೊಂಡಿತ್ತು.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ರಿಷಬ್ ಶೆಟ್ಟಿ ಬೇಸರ!