ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ನಾಕಾದಿಂದ ದೂದಪೀರಾ ದರ್ಗಾವರೆಗಿನ ಮುಖ್ಯ ಬಜಾರ್ ರಸ್ತೆಯ ಡಾಂಬರ್ ಕಿತ್ತು ಹೋಗಿದ್ದರಿಂದ ಸಂಚಾರಕ್ಕೆ ಸಂಚಕಾರ ಎದುರಾಗಿದೆ.
ಸುಮಾರು ಒಂದು ಕಿ.ಮೀ. ನಷ್ಟು ರಸ್ತೆ ತಗ್ಗು ಗುಂಡಿಗಳಿಂದ ಕೂಡಿದ್ದು, ಸದಾ ಧೂಳಿನಿಂದ ಆವೃತ್ತವಾಗಿರುತ್ತದೆ. ಜನದಟ್ಟಣೆ, ವಾಹನ ಸಂಚಾರದಿಂದ ರಸ್ತೆ ಬದಿಯ ಕಿರಾಣಿ, ಬಟ್ಟೆ ಅಂಗಡಿ, ಸ್ವೀಟ್ವಾರ್ಟ್, ಔಷಧ ಅಂಗಡಿ, ಹೋಟೆಲ್, ಹಣ್ಣು- ತರಕಾರಿ, ಬೀದಿ ಬದಿ ವ್ಯಾಪಾರಸ್ಥರ ಮಾರಾಟದ ವಸ್ತುಗಳ ಮೇಲೆ ಧೂಳು ಆವರಿಸುತ್ತಿದೆ. ಇದರಿಂದ ವ್ಯಾಪಾರಸ್ಥರು ಕಂಗೆಟ್ಟಿದ್ದಾರೆ.
ಮೂರು ವರ್ಷಗಳ ಕಾಲ ಪುರಸಭೆ ಆಡಳಿತ ಮಂಡಳಿ ರಚನೆಯಾಗದ್ದರಿಂದ ಮತ್ತು ಅನುದಾನದ ಕೊರತೆಯಿಂದಾಗಿ ಈ ರಸ್ತೆ ಡಾಂಬರೀಕರಣಗೊಂಡಿಲ್ಲ.
ಐದು ವರ್ಷಗಳ ಹಿಂದೆ ಈ ರಸ್ತೆಯನ್ನು ಡಾಂಬರೀಕಣ ಮಾಡಲಾಗಿತ್ತು. ಕಳೆದ 2 ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿಗಾಗಿ ಪಟ್ಟಣದ ಎಲ್ಲ ರಸ್ತೆಗಳನ್ನು ಅಗೆಯಲಾಗಿತ್ತು. ಹಾಗೆ ಅಗೆದಿದ್ದ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು ಎಂಬ ನಿಯಮವಿದ್ದರೂ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಗುಂಡಿ ಮುಚ್ಚಿ ಕೈ ತೊಳೆದುಕೊಂಡಿದ್ದರು. ಇದೀಗ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳಿನಿಂದ ಕೂಡಿರುತ್ತದೆ. ಹೀಗಾಗಿ ಆದಷ್ಟು ಬೇಗ ಡಾಂಬರೀಕರಣ ಇಲ್ಲವೇ ಕಾಂಕ್ರೀಟ್ ರಸ್ತೆಯನ್ನಾಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮುಖ್ಯ ಬಜಾರ್ ರಸ್ತೆ ಸಂಪೂರ್ಣ ಹಾಳಾಗಿ ಧೂಳಿನಿಂದ ಕೂಡಿದೆ. ಇದರಿಂದ ವ್ಯಾಪಾರಕ್ಕೆ ತೊಂದರೆ, ನಷ್ಟವಾಗುತ್ತಿದೆ. ಬೆಳಗ್ಗೆಯಿಂದ ರಾತ್ರಿವರೆಗೂ ರಸ್ತೆ ಬದಿ ಧೂಳಿನಲ್ಲಿಯೇ ಇರುವ ವ್ಯಾಪಾರಸ್ಥರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪುರಸಭೆ ಸದಸ್ಯರು, ಶಾಸಕರು, ಸಂಸದರು ಇತ್ತ ಗವನಹರಿಸಿ ಧೂಳಿನಿಂದ ಮುಕ್ತವಾಗಿಸಬೇಕು.
| ಮಂಜುನಾಥ ಹೊಗೆಸೊಪ್ಪಿನ, ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಲಕ್ಷೆ್ಮೕಶ್ವರ
ಶಿಗ್ಲಿ ನಾಕಾದಿಂದ ದರ್ಗಾವರೆಗಿನ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಆದಷ್ಟು ಬೇಗ ಸಿಸಿ ರಸ್ತೆ ನಿರ್ವಿುಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದಾರೆ.
| ಶಂಕರ ಹುಲ್ಲಮ್ಮನವರ, ಮುಖ್ಯಾಧಿಕಾರಿ ಪುರಸಭೆ