ಕೊಕ್ಕಡ: ಕೊಕ್ಕಡ ಗ್ರಾಮದ ಗುಂಪಕಲ್ಲು-ತೆಂಕುಬೈಲು ಕಾಡಿನಲ್ಲಿ 500 ವರ್ಷಗಳಿಗಿಂತಲೂ ಹಳೆಯದಾಗಿರಬಹುದು ಎನ್ನಬಹುದಾದ ಕಲ್ಲಿನ ಕಟ್ಟೆಯೊಂದು ಸ್ಥಳೀಯರ ಕಣ್ಣಿಗೆ ಮಂಗಳವಾರ ಗೋಚರವಾಗಿದೆ.
15 ಅಡಿ ಉದ್ದ ಹಾಗು 7.5 ಅಡಿ ಅಗಲ ಇರುವ ಕಟ್ಟೆ ಇದಾಗಿದ್ದು ಕಟ್ಟೆಯ ಮೇಲೆ ಹೋಗಲು ಮೆಟ್ಟಿಲಿನ ವ್ಯವಸ್ಥೆ ಇರುವ ಕುರುಹು ಪತ್ತೆಯಾಗಿದೆ.
ಇತ್ತೀಚೆಗೆ ಇಲ್ಲಿನ ರಕ್ತೇಶ್ವರಿ ಗುಡ್ಡೆಯಲ್ಲಿ ರಕ್ತೇಶ್ವರಿ ದೇವಿ, ಬ್ರಹ್ಮರಕ್ಕಸನ ಪ್ರತಿಷ್ಠಾಪನೆ ನಡೆದಿತ್ತು. ಇದೀಗ ಈ ಜಾಗದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಕಾಡಿನ ಒಳಗೆ ಸ್ಥಳೀಯರಾದ ಗಣೇಶ್ ಗೌಡ ಕಲಾಯಿ, ಸೀತಾರಾಮ ನರಿಮೊಗರು, ಸೇಸಪ್ಪ ಗೌಡ ತೆಂಕುಬೈಲು, ಪುರಂದರ ಗೌಡ ತೆಂಕುಬೈಲು ಅವರು ಉಪ್ಪಾರಹಳ್ಳದ ಕಡೆ ಹೋಗುವಾಗ ದಾರಿಯಲ್ಲಿ ಈ ಕಟ್ಟೆ ಗೋಚರವಾಗಿದೆ. ಊರ ಹಿರಿಯರ ಪ್ರಕಾರ ಇದು ಸುಮಾರು 500 ವರ್ಷಗಳ ಹಿಂದೆ ಮಾಡಿದ್ದಿರಬಹುದು ಎಂದು ಹೇಳಲಾಗುತ್ತಿದೆ.
ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿತ್ತು
ಕೆಲ ಸಮಯದ ಹಿಂದೆ ರಕ್ತೇಶ್ವರಿ ಗುಡ್ಡೆಯಲ್ಲಿ ದೈವಗಳನ್ನು ಪ್ರತಿಷ್ಠಾಪಿಸುವ ಸಂದರ್ಭ ಜ್ಯೋತಿಷಿಗಳು ಸ್ಥಳೀಯವಾಗಿ ಸಂಬಂಧಪಟ್ಟಂತೆ ಬೇರೆ ಕಟ್ಟೆಗಳು ಕೂಡ ಗೋಚರಿಸಲಿವೆ ಎಂದು ತಿಳಿಸಿದ್ದರು. ಅಲ್ಲದೆ ಗ್ರಾಮ ಹಾಗೂ ಸೀಮೆಯ ದೇವರಾದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೂ ಆ ಕಟ್ಟೆಗಳಿಗೂ ಸಂಬಂಧ ಇದೆ ಎಂದು ಸೂಕ್ಷ್ಮವಾಗಿ ತಿಳಿಸಿದ್ದರು. ಇದೀಗ ಗುಂಪಕಲ್ಲು-ತೆಂಕುಬೈಲು ಪರಿಸರದಲ್ಲಿ ಕಂಡುಬಂದಿರುವ ಕಟ್ಟೆ ದೈವ-ದೇವರುಗಳಿಗೆ ಸಂಬಂಧಪಟ್ಟದ್ದೇ ಇರಬಹುದು ಎಂಬುದಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಊರ ಆಸ್ತಿಕ ವಲಯದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.