ಬೆಂಗಳೂರು : ಕರೊನಾ ಕರ್ಫ್ಯೂ ತೆರವಾದ ಹಿನ್ನೆಲೆಯಲ್ಲಿ, ಮನೆಯಲ್ಲೇ ಸೆರೆಯಾಗಿದ್ದ ಜನರು, ಇದೀಗ ಕೋವಿಡ್ ಭಯ ಬಿಟ್ಟು ಪ್ರವಾಸಿ ತಾಣಗಳ ಕಡೆ ಮುಖಮಾಡಿದ್ದಾರೆ. ಮೈಸೂರು ರಸ್ತೆ ರಾಮೋಹಳ್ಳಿ ಸಮೀಪ ಇರುವ ವಿಶ್ವ ವಿಖ್ಯಾತವಾದ ದೊಡ್ಡ ಆಲದ ಮರ ವೀಕ್ಷಣೆಗೆ ಪ್ರವಾಸಿಗರ ದಂಡು ಬರುತ್ತಿರುವುದು ಇಂದು ಕಂಡುಬಂತು.
ನಾಲ್ಕು ತಿಂಗಳಿಂದ ಗೇಟ್ ಹಾಕಲಾಗಿದ್ದು, ಇದೀಗ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿದೆ. 400 ವರ್ಷಕ್ಕೂ ಹಳೆಯದಾದ ಈ ಮರವು ಎಂದಿನಂತೆ ಮತ್ತೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆಲದ ಮರದ ಸುತ್ತ ಇರುವ ಅಂಗಡಿಗಳು ಮತ್ತು ಪಾದವಾರ ಅಂಗಡಿಗಳು ತೆರೆದಿದ್ದು, ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ವ್ಯಾಪಾರಿಗಳ ಮುಖದಲ್ಲಿ ನಗು ಮೂಡಿದೆ.
ಇದನ್ನೂ ಓದಿ: ಎರಡು ಕರೊನಾ ರೂಪಾಂತರಿಗಳ ಸೋಂಕು ಒಟ್ಟಿಗೇ ತಗುಲಿದ ಮಹಿಳೆ!
ಆಲದ ಮರದ ಕೆಳಗೆ ಕಳೆ ಮತ್ತು ಅನವಶ್ಯಕ ಗಿಡಗಳು ಬೆಳೆದಿದೆ. ಅವುಗಳನ್ನು ತೆರವು ಮಾಡಿಲ್ಲ. ಅಲ್ಲಲ್ಲೇ ಹಾಕಿರುವ ಕುರ್ಚಿಗಳ ಮೇಲೆ ಕುಳಿತು ಕಾಲ ಕಳೆಯಬೇಕಾದರೆ ಸೊಳ್ಳೆಯ ಕಾಟ ಹೆಚ್ಚಾಗಿದೆ. ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.