ತಿರುವನಂತಪುರಂ : ದೇಶಾದ್ಯಂತ ಕರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗಿರುವಾಗ, ಅತಿ ಹೆಚ್ಚು ನಿತ್ಯ ಪ್ರಕರಣಗಳನ್ನು ದಾಖಲಿಸುತ್ತಿರುವ ಕೇರಳ ರಾಜ್ಯದಲ್ಲಿ, ಇಂದು, ನಾಳೆ ಸಂಪೂರ್ಣ ಲಾಕ್ಡೌನ್ ಘೋಷಣೆಯಾಗಿದೆ. ಕಳೆದ ವಾರಾಂತ್ಯದಂತೆಯೇ ಈ ಶನಿವಾರ, ಭಾನುವಾರವೂ, ಕಠಿಣ ಮಾರ್ಗಸೂಚಿಗಳೊಂದಿಗೆ ಲಾಕ್ಡೌನ್ ಜಾರಿಯಲ್ಲಿರುವುದು ಎಂದು ಕೇರಳ ಸರ್ಕಾರ ಆದೇಶ ಹೊರಡಿಸಿದೆ.
ಆದರೆ, ಜುಲೈ 20 ಅಥವಾ 21 ರಂದು ಸಲ್ಲುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ಲಾಕ್ಡೌನ್ ನಿರ್ಬಂಧಗಳನ್ನು ಜುಲೈ 18 ರಿಂದ 20 ರವರೆಗೆ ಸಡಿಲಗೊಳಿಸಲಾಗುವುದು. ಆ ದಿನಗಳಲ್ಲಿ ಅಗತ್ಯ ವಸ್ತುಗಳ ಮಳಿಗೆಗಳೊಂದಿಗೆ, ಬಟ್ಟೆ ಅಂಗಡಿ, ಪಾದರಕ್ಷೆ, ಒಡವೆ, ಎಲೆಕ್ಟ್ರಾನಿಕ್ಸ್ ಮಳಿಗೆಗಳಿಗೆ ರಾತ್ರಿ 8 ರವರೆಗೆ ತೆರೆಯುವ ಅವಕಾಶ ನೀಡಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್ಗೆ ಆಸ್ತಿ ಕೊಡಲ್ಲ ಅಂದೆ…
ಶುಕ್ರವಾರದಂದು ಕೇರಳದಲ್ಲಿ 13,750 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, 130 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ. “ರಾಜ್ಯದಲ್ಲಿ ಪಾಸಿಟಿವಿ ರೇಟ್ ಶೇ. 30 ರಷ್ಟಿದ್ದದ್ದು ಈಗ ಶೇ. 10.4 ಕ್ಕೆ ಇಳಿದಿದೆ. ಕೇರಳದಲ್ಲಿ ಎರಡನೇ ಅಲೆಯು ನಿಧಾನವಾಗಿ ಆರಂಭವಾಗಿ, ನಿಧಾನವಾಗಿ ಅಂತ್ಯಗೊಳ್ಳುತ್ತಿದೆ” ಎಂದು ನಿನ್ನೆಯ ದಿನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದರು ಎನ್ನಲಾಗಿದೆ.
ರಾಜ್ಯದಲ್ಲಿ ಲಸಿಕಾ ಅಭಿಯಾನಕ್ಕೆ ವೇಗ ನೀಡಲು ಜುಲೈ ಮತ್ತು ಆಗಸ್ಟ್ನಲ್ಲಿ 60 ಲಕ್ಷ ಡೋಸ್ ಕರೊನಾ ಲಸಿಕೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಈವರೆಗೆ 1.17 ಕೋಟಿ ಜನರಿಗೆ ಕರೊನಾ ಲಸಿಕೆಯ ಮೊದಲನೇ ಡೋಸ್ ನೀಡಲಾಗಿದ್ದು, 44.18 ಲಕ್ಷ ಜನರು ಎರಡೂ ಡೋಸ್ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು